ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ (Monsoon Rain) ಕುಂಟಿತವಾಗಿದ್ದು, ಇದರ ನಡುವೆ ಸೆಪ್ಟೆಂಬರ್ ಆರಂಭದಿಂದಲೇ ಬಿಸಲಿನ ಝಳ ಹೆಚ್ಚಳವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಅಲ್ಲದೇ ಎಲ್ ನಿನೋ ಪರಿಣಾಮದಿಂದಾಗಿ ಮಳೆ ಅಭಾವ ಉಂಟಾಗಿದ್ದು, ಇತ್ತ ತಾಪಮಾನದಲ್ಲಿ ಏರಿಕೆಯಾಗುತ್ತಿದೆ.

ಇನ್ನು, ಬೆಂಗಳೂರಲ್ಲಿ ಮಾತ್ರವಲ್ಲದೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಏಕಾಏಕಿ ತಾಪಮಾನ ಏರಿಕೆ ಕಂಡಿದ್ದು, ಕಲಬುರಗಿ, ಉಡುಪಿ, ಮಂಗಳೂರು, ಗುಲ್ಬರ್ಗ ಸೇರಿದಂತೆ ಅನೇಕ ಭಾಗಗಳಲ್ಲಿ ಬಿಸಿಲಿನ ಧಗೆ ಹೆಚ್ಚಳವಾಗಿದ್ದು, ಜನರು ಇದೇನು ಮಳೆಗಾಲವೋ? ಬೇಸಿಗೆಯೋ ಎನ್ನುವಂತೆ ಮಾಡಿದೆ.
ರಾಜ್ಯದ 182 ತಾಲೂಕುಗಳಲ್ಲಿ ಮಳೆ ಅಭಾವ ಉಂಟಾಗಿದ್ದರೆ, 20 ತಾಲೂಕುಗಳಲ್ಲಿ ತೀವ್ರ ಕೊರತೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ವರದಿ ಬಿಡುಗೆ ಮಾಡಿದೆ. ಅಲ್ಲದೇ ಎಲ್ ನಿನೋ ಪರಿಣಾಮ ಮುಂದಿನ ಬೇಸಿಗೆವರೆಗೆ ಇರಲಿದೆ ಎಂದು ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಮಳೆ ಕೊರತೆ ಹಿನ್ನೆಲೆ 101 ತಾಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಎಂದು ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ. ಜೂನ್ 1ರಿಂದ ಸೆಪ್ಟಂಬರ್ 7ರ ವರೆಗೆ ವಾಡಿಕೆಯಂತೆ 725 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ ಈವರೆಗೆ ರಾಜ್ಯದಲ್ಲಿ 485 ಮಿಮೀ ಮಳೆ ಸುರಿದಿದೆ.
