Friday, September 18, 2026
Homeಜಿಲ್ಲಾಸುದ್ದಿMudigere: ದೇಶಕ್ಕಾಗಿ ತ್ಯಾಗದ ಮನೋಭಾವದಿಂದ ಕಾರ್ಯನಿರ್ವಹಿಸಬೇಕು: ವಿನಯ್ ಗುರೂಜಿ

Mudigere: ದೇಶಕ್ಕಾಗಿ ತ್ಯಾಗದ ಮನೋಭಾವದಿಂದ ಕಾರ್ಯನಿರ್ವಹಿಸಬೇಕು: ವಿನಯ್ ಗುರೂಜಿ

ಮೂಡಿಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ಮೋಹವನ್ನು ಪರಿತ್ಯಾಗ ಮಾಡಿದ ನಾಯಕರು. ಕೇಸರಿ ಎಂದರೆ ತ್ಯಾಗದ ಸಂಕೇತವಾಗಿದ್ದು, ದೇಶಕ್ಕಾಗಿ ತ್ಯಾಗದ ಮನೋಭಾವದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಗೌರಿಗದ್ದೆ ಅವದೂತ ವಿನಯ್ ಗುರೂಜಿ ಹೇಳಿದರು.
ಅವರು ಗುರುವಾರ ಪಟ್ಟಣದ ರೈತಭವನದಲ್ಲಿ ರಕ್ಷಾ ಫೌಂಡೇಶನ್ ಸಂಸ್ಥಾಪಕಿ ಸುಶ್ಮಾ ವಿಭಾ ಅವರ ನೇತೃತ್ತದಲ್ಲಿ ಬಿಜೆಪಿ ಪಕ್ಷದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ನಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಇಂದು ದೇಶದ ಜನರು ನಿರ್ಭಯವಾಗಿ ಬದುಕಲು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವೂ ಒಂದು ಕಾರಣವಾಗಿದೆ. ಸ್ವಾತಂತ್ರ‍್ಯ ದೊರೆತಿದ್ದರೂ, ದೇಶವು ಇನ್ನೂ ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ವಿದೇಶಿ ವಾಹನಗಳು ಹಾಗೂ ವಸ್ತುಗಳ ಬಳಕೆ ಮುಂದುವರಿದಿದ್ದು, ದೇಶೀಯ ಉತ್ಪನ್ನಗಳ ಬಳಕೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕೆಂದ ಅವರು, ರಾಮರಾಜ್ಯದ ನಿರ್ಮಾಣದ ಪ್ರಯತ್ನದಲ್ಲಿ ದೇಶ ಸಾಗುತ್ತಿದ್ದು, ಪ್ರತಿಯೊಬ್ಬರೂ ರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕನಿಷ್ಠ ಒಂದು ಕ್ಷಣವಾದರೂ ಪ್ರಯತ್ನಿಸಬೇಕು. ದೇಶದಲ್ಲಿ ಶಾಂತಿ ಮತ್ತು ಸುರಕ್ಷತೆ ಕಾಪಾಡಲು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ದೇಶದ ಸಾರ್ವಭೌಮತೆ ಹಾಗೂ ಭದ್ರತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂದು ಹೇಳಿದರು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ  ಹರ್ದೀಪ್‌ಸಿಂಗ್ ಗಿಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಸವಾಲುಗಳು ಹಾಗೂ ಸಂಘರ್ಷಗಳ ನಡುವೆಯೇ ದೇಶದ ಆಡಳಿತ ನಡೆಸಿದ್ದು, ಬಡವರು, ರೈತರು ಹಾಗೂ ದುರ್ಬಲ ವರ್ಗಗಳ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ರೈತರ ಆದಾಯಕ್ಕೆ ನೆರವಾಗುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಬೆಳೆ ವಿಮೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಕೃಷಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಪ್ರಯತ್ನ ನಡೆದಿದೆ. ಬಡ ಕುಟುಂಬಗಳಿಗೆ ಮನೆ, ಶೌಚಾಲಯ, ಅಡುಗೆ ಅನಿಲ, ಬ್ಯಾಂಕ್ ಖಾತೆ ಹಾಗೂ ಆರೋಗ್ಯ ಸೇವೆಗಳನ್ನು ತಲುಪಿಸುವ ಉದ್ದೇಶದ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ಮೋದಿ ಸರಕಾರ ಕ್ರಮ ವಹಿಸಿದ್ದು, ಅವರ ಸೇವೆ ಇನ್ನಷ್ಟು ದೇಶಕ್ಕೆ ದೊರಕಲಿ ಎಂದು ಹೇಳಿದರು.
ಎಂಎಲ್‌ಸಿ ಸಿ.ಟಿ.ರವಿ ಮಾತನಾಡಿ, ದೇಶದಲ್ಲಿ ಅನೇಕ ಜನಪ್ರಿಯ ಪ್ರಧಾನಿಗಳು ಆಡಳಿತ ನಡೆಸಿದ್ದಾರೆ. ಆದರೆ ರಾಜಕೀಯದಲ್ಲಿ ವ್ಯಕ್ತಿ ವೈಭವಕ್ಕಿಂತ ವ್ಯಕ್ತಿತ್ವದ ಗುಣಗಳಿಗೆ ಮಹತ್ವ ನೀಡುವಂತಹ ಹೊಸ ಸಂಸ್ಕೃತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿದ್ದಾರೆ. ದೇಶದ ಅಭಿವೃದ್ಧಿ ಜತೆಗೆ ದೇಶದ ಮೇಲೆ ಆಕ್ರಮಣ ನಡೆಸುವ ಭಯೋತ್ಪಾದನೆ ಬೇರುಗಳನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಮೋದಿ ನೇತೃತ್ವದ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹಾಗಾಗಿ  ಇಂದು ಭಾರತದ ಪ್ರಧಾನಿಯೊಂದಿಗೆ ವಿದೇಶಿಗರು ಸೆಲ್ಫಿ ತೆಗೆದುಕೊಳ್ಳುವಂತಹ ಗೌರವದ ಸ್ಥಾನಕ್ಕೆ ದೇಶ ತಲುಪಿದೆ. ಸೆ.17ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಹಾಗೂ ವಿಶ್ವಕರ್ಮ ದಿನಾಚರಣೆಯ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವೂ ಆಗಿರುವುದು ವಿಶೇಷವಾಗಿದೆ. ಅವರ ಬಳಿ ಸ್ವಂತ ಮನೆ, ಕಾರು ಇಲ್ಲದೆ ಸರಳ ಜೀವನ ನಡೆಸುತ್ತಿದ್ದಾರೆ. ದೇಶಕ್ಕಾಗಿ ಇನ್ನಷ್ಟು ಸೇವೆ ಸಲ್ಲಿಸಲು ಮೋದಿ ಅವರಿಗೆ ದೀರ್ಘಾಯುಷ್ಯ ದೊರೆಯಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ನಮ್ಮ ದೇಶವನ್ನು ಅಭಿವೃದ್ಧಿ ಪತದಲ್ಲಿ ಕೊಂಡೊಯ್ಯಲು ಶ್ರೀ ಕೃಷ್ಣ ಪರಮಾತ್ಮ  ಮೋದಿ ಅವರ ರೂಪದಲ್ಲಿ ಹುಟ್ಟಿ ಬಂದಿದ್ದಾನೆ. ಇನ್ನು 3 ವರ್ಷದಲ್ಲಿ ಭಾರತ ಪ್ರಥಮ ಸ್ಥಾನಕ್ಕೆ ತಲುಪುವುದನ್ನು ನೋಡಲಿದ್ದೇವೆ. ದೇಶ ಮುನ್ನೆಡೆಸುವ ಮೋದಿ ಅವರಿಗೆ  ನಮ್ಮೆಲ್ಲಾ ಆಯಸ್ಸು,  ಸರ್ವಸ್ವ ನೀಡಲು ಸಿದ್ದಾರಾಗಬೇಕಿದೆ ಎಂದು ಹೇಳಿದರು.
ರಕ್ಷಾ ಫೌಂಡೇಶನ್ ಸಂಸ್ಥಾಪಕಿ ಸುಶ್ಮಾ ವಿಭಾ ಮಾತನಾಡಿ, ತನ್ನ ಸಂಸ್ಥೆಯಿಂದ ಅನೇಕ ಜನಪರವಾದ ಕಾರ್ಯಕ್ರಮ ಮಾಡಿದ್ದೇನೆ. ಮೂಡಿಗೆರೆ ತಾಲೂಕಿನಲ್ಲಿಯೂ ಟ್ಯಾಕ್ಸಿ ಚಾಲಕರ ಕುಟುಂಬ ಭದ್ರತೆಗಾಗಿ ಏನಾದರೂ ಯೋಜನೆ ರೂಪಿಸಬೇಕೆಂದುಕೊಂಡಿದ್ದು, ಇದೀಗ ಟ್ಯಾಕ್ಸಿ ಚಾಲಕರಿಗೆ ಉಚಿತವಾಗಿ ಚಾಲಕ ರಕ್ಷಾ ವಿಮೆ ಒದಗಿಸಲು ಕ್ರಮ ವಹಿಸಲಾಗಿದೆ. ಅಲ್ಲದೇ ಇಂದು ಬಿಜೆಪಿ ಪಕ್ಷದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ನಡೆಸಲು ಅವಕಾಶ ಸಿಕ್ಕಿದ್ದು ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಸಿ.ಎಸ್.ಜಯರಾಂ, ಕಸಾಯಿ ಕರ್ಮಚಾರಿಗಳು, ಮಂಗಳಮುಖಿಯರು, ಆಶಾ  ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ಉಚಿತವಾಗಿ ಚಾಲಕ ರಕ್ಷಾ ವಿಮೆ ಮಾಡಸಲು ಅರ್ಜಿ ಸ್ವೀಕರಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ಶೇಟ್ಟಿ, ತಾಲುಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ರವಿ ಬಸರವಳ್ಳಿ, ಕಲ್ಮುರುಡಪ್ಪ, ದಿನೇಶ್ ದೇವವೃಂದ, ಹಳಸೆ ಶಿವಣ್ಣ, ಕಲ್ಲೇಶ್, ಎಂ.ಆರ್.ಜಗದೀಶ್, ಮನೋಜ್ ಹಳೆಕೋಟೆ, ಸಂಪತ್‌ಕುಮಾರ್, ಪಿ.ಜಿ.ಅನುಕುಮಾರ್, ಕೆ.ಸಿ.ರತನ್, ಕವೀಶ್, ನರೇಂದ್ರ, ರವೀಂದ್ರ ಬೆಳವಾಡಿ, ಜೆ.ಎಸ್.ರಘು, ಪಂಚಾಕ್ಷರಿ, ಬಿ.ಎನ್.ಜಯಂತ್, ಎಂ.ಸಿಸುದರ್ಶನ್, ಪ್ರಮೋಧ್ ದುಂಡುಗ, ಸರೋಜಾ ಸುರೇಂದ್ರ, ಲತಾ ಲಕ್ಷ್ಮಣ್, ಎಂಎಸ್.ಸುಜಿತ್ ಮತ್ತಿತರರಿದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!