ಮಂಗಳೂರು : ಕಳೆದ 70 ವರ್ಷದಲ್ಲಿ ಕಾಂಗ್ರೆಸ್ನವರು ಏನು ಮಾಡಿದ್ದಾರೆ ಅಂತ ದೇಶದ ಜನರಿಗೆ ಗೊತ್ತಿದೆ. 10 ವರ್ಷದಲ್ಲಿ ಬಿಜೆಪಿ ಏನು ಮಾಡಿದೆ ಎಂದು ಹೇಳಲು ಅವರಿಗೆ ಸಾಧ್ಯವಾಗಿಲ್ಲ. ನಾವು 70 ವರ್ಷದಲ್ಲಿ ಮಾಡಿದ್ದನ್ನು ಇವರೆಲ್ಲ ಈಗ ಮಾರಿದ್ದಾರೆ ಅಂತ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಈಗ ಅರ್ಕಾವತಿ ವರದಿ ಕೇಳಿದ್ದಾರೆ. ಅಕ್ರಮವನ್ನು ಸಕ್ರಮ ಮಾಡುವಂಥ ಒಂದು ಪದಪುಂಜ ಬಂದುಬಿಟ್ಟಿದೆ. ಕಳೆದ 25 ವರ್ಷದಲ್ಲಿ ಏನೇನು ಅಕ್ರಮಗಳಾಗಿದೆ ಅನ್ನುವುದರ ಬಗ್ಗೆ ಸುಪ್ರೀಂ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಬೇಕು. ಯಾವುದೇ ಪಕ್ಷದವರಿರಲಿ ಎಲ್ಲವೂ ಹೊರಗೆ ಬರುತ್ತೆ ಅಂತ ಹೇಳಿದ್ರು.
ಯಾರ್ಯಾರು ಎಷ್ಟೆಷ್ಟು ಸತ್ಯ ಹರಿಶ್ಚಂದ್ರರು ಎಂಬುದು ಗೊತ್ತಾಗುತ್ತೆ. ಹಿಂದಿನ ಸರ್ಕಾರದಲ್ಲಿ ಏನೇನು ನಡೆದಿದೆ ಎಂಬುದನ್ನು ಬಿಜೆಪಿ ಕೆದಕಿಕೊಂಡು ಬರುತ್ತಿದೆ. ಬೊಫೋರ್ಸ್ ಕೇಸ್ ಎಂದು ಅದನ್ನೇ ಕಳೆದ 30 ವರ್ಷಗಳಿಂದ ಹೇಳಿಕೊಂಡು ಬಂದ್ರು. ಕೆಲವು ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಕ್ರಮಗಳನ್ನು ಸಕ್ರಮ ಮಾಡಿಕೊಂಡು ಬಂದಿರುವುದು ಸ್ಪಷ್ಟವಾಗಿದೆ ಎಂದರು.
ಮುನಿರತ್ನ ಬಂಧನ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಮುನಿರತ್ನ ಅವರ ಪ್ರಕರಣ ದ್ವೇಷ ರಾಜಕಾರಣ ಎಂಬುದು ಬದಿಗಿರಲಿ. ಇವೆಲ್ಲ ಸಾಂಕ್ರಾಮಿಕ ರೋಗದ ತರಹ ಬಂದಿರುವುದು ನರೇಂದ್ರ ಮೋದಿ ಅವರಿಂದ. ನರೇಂದ್ರ ಮೋದಿ ಗುಜರಾತ್ನಲ್ಲಿ ಸಂಜಯ್ ಜೋಷಿ ಎಂಬವರ ಸಿಡಿ ಮಾಡಿಸಿದ್ದರು. ಅಲ್ಲಿಂದ ಇದೊಂದು ಸಾಂಕ್ರಾಮಿಕ ರೋಗವಾಗಿ ಹರಡಿಕೊಂಡು ಬಂದಿದೆ. ಸಂಜಯ್ ಜೋಷಿಯವರನ್ನು ನರೇಂದ್ರ ಮೋದಿ ರಾಜಕೀಯವಾಗಿ ನಿವೃತ್ತಿ ಮಾಡಿಸಿಬಿಟ್ರು. ಈಗ ಆ ರೋಗ ಇಡೀ ದೇಶಕ್ಕೆ ಹರಡಿಕೊಂಡುಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.



