ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ದ ಮುತ್ತೋಡಿ ಅರಣ್ಯ ವಲಯದಲ್ಲಿ ಪ್ರವಾಸಿಗರಿಗೆ ಅತ್ಯಂತ ಅಪರೂಪದ ಹಾಗೂ ರೋಮಾಂಚನಕಾರಿ ದೃಶ್ಯವೊಂದು ಲಭ್ಯವಾಗಿದೆ. ಸಫಾರಿ ವೇಳೆ ದಟ್ಟ ಹಸಿರಿನ ಮರಗಳ ನಡುವೆ ಒಂದಲ್ಲ, ಎರಡೂ ಚಿರತೆಗಳು ಏಕಕಾಲದಲ್ಲಿ ಕಾಣಿಸಿಕೊಂಡು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸಿವೆ.
ಮೊದಲಿಗೆ ಮರದ ದಪ್ಪನೆಯ ಕೊಂಬೆಯ ಮೇಲೆ ಆರಾಮವಾಗಿ ಒರಗಿಕೊಂಡು ವಿಶ್ರಮಿಸುತ್ತಿದ್ದ ಚಿರತೆಯೊಂದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಈ ಚಿರತೆಯ ಬಾಲದ ಗಾಯವಾಗಿರುವುದು ಕಂಡುಬಂದಿದೆ. ಮತ್ತೊಂದು ಪ್ರಾಣಿಯೊಂದಿಗಿನ ಜಗಳ ಅಥವಾ ಬೇರಾವುದೋ ಕಾರಣದಿಂದ ಈ ಗಾಯವಾಗಿರುವ ಸಾಧ್ಯತೆಯಿದೆ.
ಅದೇ ಮರದ ಮತ್ತೊಂದು ಕೊಂಬೆಯ ಎಲೆಗಳ ಮರೆಯಲ್ಲಿ ಕುಳಿತಿದ್ದ ಮತ್ತೊಂದು ಚಿರತೆಯು ಪ್ರವಾಸಿಗರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ವಾಹನದ ಶಬ್ದ ಕೇಳುತ್ತಿದ್ದಂತೆ ಎಚ್ಚೆತ್ತ ಈ ಜೋಡಿ ಚಿರತೆಗಳು, ಎಲೆಗಳ ಮರೆಯಿಂದಲೇ ಸಫಾರಿ ವಾಹನದತ್ತ ದಿಟ್ಟಿಸಿ ನೋಡುತ್ತಿರುವ ದೃಶ್ಯ ಸೆರೆಯಾಗಿದೆ.
ಸಾಮಾನ್ಯವಾಗಿ ಕಾಡಿನಲ್ಲಿ ಚಿರತೆಗಳ ದರ್ಶನವೇ ಅಪರೂಪ, ಅದರಲ್ಲೂ ಒಂದೇ ಮರದಲ್ಲಿ ಎರಡು ಚಿರತೆಗಳು ಒಟ್ಟಿಗೆ ಕಾಣಸಿಗುವುದು ಅತ್ಯಂತ ವಿರಳ. ಮುತ್ತೋಡಿಯ ದಟ್ಟ ಕಾಡಿನ ಸೌಂದರ್ಯಕ್ಕೆ ಈ ಅಪರೂಪದ ವನ್ಯಜೀವಿಗಳ ನೋಟವು ಮತ್ತಷ್ಟು ಕಳೆ ನೀಡಿದ್ದು, ಈ ದೃಶ್ಯವು ಪ್ರಕೃತಿ ಪ್ರೇಮಿಗಳ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಂತಹ ಅದ್ಭುತ ಕ್ಷಣವಾಗಿದೆ.
