ಎನ್. ಆರ್. ಪುರ: ಮಲೆನಾಡು ಭಾಗದಲ್ಲಿ ಕಾಡಾನೆ ಮತ್ತು ಮಾನವನ ನಡುವೆ ಸಂಘರ್ಷ ನಿನ್ನೆ ಮೊನ್ನೆ ಯದಲ್ಲ. ಅನೇಕ ವರ್ಷಗಳಿಂದ ಈ ಸಮಸ್ಯೆ ಇಲ್ಲಿನ ಜನರನ್ನು ನಿದ್ದೆಗೆಡಿಸಿದೆ. ಈಗಾಗಲೇ ಮಲೆನಾಡಿನ ಭಾಗದಲ್ಲಿ ಕಾಡಾನೆ ದಾಳಿಯಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಸರ್ಕಾರ ಮಾತ್ರ ಇನ್ನೂ ಎಚ್ಚೇತ್ತುಕೊಂಡಿಲ್ಲ ಎನ್ನುವುದು ಮಲೆನಾಡಿನ ಜನರ ಪ್ರಶ್ನೆಯಾಗಿದೆ.
ಹೌದು .. ಸೋಮವಾರ ರಾತ್ರಿ ಕಾಡಾನೆಗಳ ಗುಂಪು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟುಮಾಡಿದ ಘಟನೆ ಎನ್. ಆರ್. ಪುರ ತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ ಬಿಳಾಲು ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಊರ್ಮಿಸ್ ಎಂಬುವರಿಗೆ ಸೇರಿದ ತೋಟಕ್ಕೆ ನುಗ್ಗಿದ ಕಾಡಾನೆಗಳು ಸುಮಾರು 60 ಅಡಿಕೆ ಮರಗಳು, 30 ತೆಂಗಿನ ಮರಗಳು ಹಾಗೂ 50 ಬಾಳೆ ಗಿಡಗಳನ್ನು ನಾಶಪಡಿಸಿವೆ. ಅಲ್ಲದೆ ಮನೆಯ ಮುಂಭಾಗದಲ್ಲಿದ್ದ ಕಬ್ಬಿಣದ ಗೇಟ್ನ್ನು ಮುರಿದು ಹಾನಿಗೊಳಿಸಿವೆ. ಇದೇ ವೇಳೆ ನಾಗರಾಜ್ ಎಂಬುವರ ತೋಟಕ್ಕೂ ನುಗ್ಗಿದ ಕಾಡಾನೆಗಳ ಗುಂಪು ಸುಮಾರು 150 ಅಡಿಕೆ ಮರಗಳು, 50 ತೆಂಗಿನ ಮರಗಳು ಹಾಗೂ 250 ಬಾಳೆ ಗಿಡಗಳನ್ನು ತುಳಿದು ಹಾಳು ಮಾಡಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆಳೆ ಹಾನಿಯ ಮೌಲ್ಯಮಾಪನ ಕೈಗೊಂಡಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
