ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೆಂಬಲ್ ರನ್ ಕೈಗೊಂಡಿದ್ದಾರೆ. ತಮಿಳುನಾಡಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಕುಂಬಕೋಣಂಗೆ ತೆರಳಿದ ಡಿಕೆಶಿ ಅಲ್ಲಿನ ಪ್ರತ್ಯಂಗರಿ ದೇವಿಗೆ ವಿಶೇಷ ಪೂಜೆ, ಹೋಮ, ಹವನಗಳನ್ನು ನಡೆಸಿದರು. ಸಾಮಾನ್ಯವಾಗಿ ಶತ್ರು ಸಂಹಾರಕ್ಕಾಗಿ ತಾಯಿ ಪ್ರತ್ಯಂಗರಿ ದೇವಿ ದರ್ಶನ, ಹೋಮ, ಹವನ ನಡೆಸಲಾಗುತ್ತದೆ. ಇಂದು ಬೆಳಗ್ಗೆ ಹೆಲಿಕ್ಯಾಪ್ಟರ್ನಲ್ಲಿ ಕುಂಭಕೋಣಂಗೆ ತೆರಳಿದ ಡಿ.ಕೆ. ಶಿವಕುಮಾರ್ ಅಲ್ಲಿನ ಪ್ರತ್ಯಂಗರಿ ದೇವಿ ದೇವಾಲಯದಲ್ಲಿ ಪೂಜೆ ನೆರವೇರಿಸಿ ನಂತರ ಕಾಂಚಿಪುರಂನ ವರದರಾಜು ಪೆರುಮಾಳ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಅಧಿಕಾರ ಹಂಚಿಕೆಯ ವಿಚಾರ ಮುನ್ನಲೆಗೆ ಬಂದು ಸಚಿವರುಗಳ ಔತಣಕೂಟದ ರಾಜಕೀಯ ನಡೆಯುತ್ತಲೇ ಇದೆ. ಈ ನಡುವೆ ವಿದೇಶ ಪ್ರವಾಸ ಕೈಗೊಂಡು ವಾಪಸ್ಸಾಗಿರುವ ಡಿಕೆಶಿ ಎಂದಿನಂತೆ ತನ್ನ ಡಿಫರೆಂಟ್ ನಡೆಯ ಮೂಲಕ ಸುದ್ದಿಯಾಗುತ್ತಿದ್ದಾರೆ. ಅಧಿಕಾರದ ವಿಚಾರದಲ್ಲಿ ಜ್ಯೋತಿಷ್ಯ, ದೇವರನ್ನು ನಂಬುವ ಡಿ.ಕೆ.ಶಿ. ಈಗ ಮತ್ತೊಮ್ಮೆ ದೇವಾಲಯ ದರ್ಶನ ಮಾಡುತ್ತಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
