ಕಾಸರಗೋಡು(ಜ.13): ಪಿಸ್ತಾ ಸಿಪ್ಪೆ ನುಂಗಿ 2 ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ನಡೆದಿದೆ.
ಕುಂಬಳೆಯ ಭಾಸ್ಕರ್ ನಗರ ನಿವಾಸಿ ಅನ್ವರ್ ಹಾಗೂ ಮೆಹರೂಫ ಎಂಬುವರ ಮಗ ೦೨ ವರ್ಷದ ಅನಸ್ ಮೃತ ಬಾಲಕ. ಶನಿವಾರ ಪಿಸ್ತಾವನ್ನು ಸಿಪ್ಪೆ ಸಹಿತ ನುಂಗಿದ್ದ. ಇದು ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದೆ. ತಕ್ಷಣ ಪೋಷಕರು, ಸಿಪ್ಪೆಯ ಒಂದು ಭಾಗ ಹೊರ ತೆಗೆದಿದ್ದರು. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ತಪಾಸಣೆ ಮಾಡಿ ಮಗುವಿನ ಗಂಟಲಿನಲ್ಲಿ ಏನು ಸಿಕ್ಕಿ ಹಾಕಿಕೊಂಡಿಲ್ಲ ಎಂದಿದ್ದಾರೆ.
ಆದರೆ ಭಾನುವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಭಯಗೊಂಡ ಪೋಷಕರು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗೆ ಪಿಸ್ತಾ ಸಿಪ್ಪೆ ಶ್ವಾಸಕೋಶ ಸೇರಿತ್ತು. ಉಸಿರಾಟಕ್ಕೆ ತೊಂದರೆಯಾಗಿ ಮಗು ಕೊನೆಯುಸಿರೆಳೆದಿದೆ.
ಎಚ್ಚರ ವಹಿಸಿ : ಪುಟ್ಟ ಮಕ್ಕಳಿಗೆ ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಅನ್ನುವ ಜ್ಞಾನ ಇರೋದಿಲ್ಲ. ಕೈಗೆ ಸಿಕ್ಕಿದ್ದನ್ನೆಲ್ಲ ಬಾಯಿಗೆ ಹಾಕುವುದು ಮಕ್ಕಳ ಚಟುವಟಿಕೆಯ ಭಾಗವಾಗಿರುತ್ತೆ. ಹೀಗಾಗಿ ಬಾಟಲಿಗಳ ಮುಚ್ಚಳ, ನಾಣ್ಯ, ಪಿನ್, ಇನ್ನಿತರೆ ಯಾವುದೇ ವಸ್ತುಗಳು ಮಕ್ಕಳ ಕೈಗೆ ಸಿಗದಂತೆ ಇಡಬೇಕು. ಜೊತೆಗೆ ಮಕ್ಕಳಿಗೆ ಬುದ್ದಿ ಬರುವವರೆಗೆ ಅತ್ಯಂತ ನಾಜೂಕಿನಿಂದ, ಜವಾಬ್ದಾರಿಯುತವಾಗಿ ಪಾಲನೆ ಮಾಡಬೇಕಾದ್ದು ಪೋಷಕರ ದೊಡ್ಡ ಜವಾಬ್ದಾರಿ.
