ಮೈಸೂರು : ಮುಡಾ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಯನ್ನು ಸಿಬಿಐಗೆ ನೀಡಲು ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ನಿರಾಕರಿಸಿದೆ. ತನಿಖೆಯನ್ನು ಸಿಬಿಐಗೆ ನೀಡಬೇಕೆಂದು ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಆದರೆ ಈ ವಿಚಾರವಾಗಿ ಕಾನೂನು ಹೋರಾಟ ಮುಂದುವರೆಸುತ್ತೇನೆಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ನ್ಯಾಯಾಲಯದ ತೀರ್ಪು ಪ್ರಕಟವಾದ ಬಳಿಕ ಮಾತನಾಡಿದ ಅವರು, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಹೋಗುತ್ತೇನೆ. ಹೈಕೋರ್ಟ್ ಆದೇಶದ ಪ್ರತಿ ಸಿಕ್ಕ ಬಳಿ ಅದನ್ನು ಪರಿಶೀಲಿಸಿ ಬಳಿಕ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಲೋಕಾಯುಕ್ತ ತನಿಖೆ ಬಗ್ಗೆ ನಮಗೆ ನಂಬಿಕೆ ಇಲ್ಲ. ಪ್ರಕರಣದ ತನಿಖೆ ಸಿಬಿಐಗೆ ನೀಡುವಂತೆ ಕೋರಿ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಹೇಳಿದರು.
ಯಾವ ವಿಚಾರವನ್ನು ಇಟ್ಟುಕೊಂಡು ನ್ಯಾಯಾಲಯ ವಜಾ ಮಾಡಿದೆ ಅಂತ ಗೊತ್ತಿಲ್ಲ. ಲೋಕಾಯುಕ್ತ ತನಿಖೆ ಸಿದ್ದರಾಮಯ್ಯ ಹೇಳಿದಂತೆ ನಡೆಯುತ್ತಿದೆ ಎಂಬ ಅನುಮಾನ ಇತ್ತು. ಆ ಕಾರಣಕ್ಕೆ ನಾವು ಸಿಬಿಐಗೆ ಹೋಗಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಮುಂದಿನ ವಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇವೆಂದು ತಿಳಿಸಿದರು.
ಈ ಯುದ್ಧರಲ್ಲಿ ಏಳು ಬೀಳು ಸಾಮಾನ್ಯ. ಈವರೆಗೆ ನಾವು ಗೆದ್ದಿದ್ವಿ, ಈಗ ಸಣ್ಣ ಹಿನ್ನಡೆಯಾಗಿದೆ. ಇದರಿಂದ ನಾನು ವಿಚಲಿತನಾಗುವುದಿಲ್ಲ. ಲೋಕಾಯುಕ್ತ ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ. ನಮ್ಮ ಆಗ್ರಹಕ್ಕೆ ಬದ್ಧವಾಗಿ ಹೋರಾಟವನ್ನು ಮುಂದುವರೆಸುತ್ತೇವೆಂದರು.
ಮುಡಾ ಅಕ್ರಮ : ಹೈಕೋರ್ಟ್ ತೀರ್ಪಿನಿಂದ ವಿಚಲಿತನಾಗೋದಿಲ್ಲ – ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ – ದೂರುದಾರ ಸ್ನೇಹಮಯಿ ಕೃಷ್ಣ..!
RELATED ARTICLES
