ಕೊಪ್ಪ: ಅಮ್ಮ ಫೌಂಡೇಶನ್ ವತಿಯಿಂದ ನಾಳೆ(ಶನಿವಾರ) ಎರಡನೇ ಬೃಹತ್ ಉದ್ಯೋಗ ಮೇಳವನ್ನು ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಆಯೋಜಿಸ ಲಾಗಿದೆ ಎಂದು ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ತಿಳಿಸಿದರು.
‘ಬೆಂಗಳೂರಿನ ಹಲವು ಪ್ರತಿಷ್ಠಿತ ಕಂಪನಿಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ. ಪದವಿಪೂರ್ವ, ಡಿಪ್ಲೊಮಾ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಅಭ್ಯರ್ಥಿಗಳು ಹಾಜರಾಗಬಹುದು. ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿ, ಭಾವಚಿತ್ರ, ಆಧಾರ್ ಕಾರ್ಡ್, ಸ್ವ ವಿವರದ ಅರ್ಜಿಯೊಂದಿಗೆ ಹಾಜರಾಗಬೇಕು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕೊಪ್ಪ, ಶೃಂಗೇರಿ, ಎನ್. ಆರ್.ಪುರ ತಾಲ್ಲೂಕಿನ ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನ ಇಲ್ಲ. ಪ್ರತಿವರ್ಷ 1,800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರ ಬರುತ್ತಿದ್ದಾರೆ. ಅವರು ಉದ್ಯೋಗ ಪಡೆಯುವಲ್ಲಿ ಸವಾಲು ಎದುರಿಸುತ್ತಿದ್ದು, ನಿರುದ್ಯೋಗಿಗಳಾಗುತ್ತಿದ್ದಾರೆ. ಹೇಗೆ ಸಂದರ್ಶನ ಎದುರಿಸಬೇಕು ಎಂಬ ಮಾಹಿತಿಯನ್ನು ಉದ್ಯೋಗ ಮೇಳಕ್ಕೆ ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಆ.20 ರಂದು ತರಬೇತಿ ನೀಡಲಾಗುತ್ತಿದೆ’ ಎಂದರು.
‘ಅಂದು ಕನಿಷ್ಠ 150 ಮಂದಿಗೆ ಸ್ಥಳದಲ್ಲೇ ಆಯ್ಕೆ ಪ್ರಮಾಣ ಪತ್ರ ವಿತರಿಸಲಾಗುತ್ತದೆ. ಈ ಭಾಗದ 500 ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಉದ್ಯೋಗದಾತ ಫೌಂಡೇಶನ್ನ ರುಕ್ಮಾಂಗದ ಅವರು ಸಹಕಾರ ನೀಡುತ್ತಿದ್ದಾರೆ.
2022ರಲ್ಲಿ ನಡೆದ ಉದ್ಯೋಗ ಮೇಳದಲ್ಲಿ 3,485 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಬಾರಿ 300ಕ್ಕೂ ಹೆಚ್ಚು ಮಂದಿ ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ. ಉದ್ಯೋಗ ಮೇಳದ ದಿನ ಸ್ಥಳದಲ್ಲಿ ಬೆಳಿಗ್ಗೆ 9 ಗಂಟೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಮಾಹಿತಿಗೆ 80956 79666 ಸಂಪರ್ಕಿಸಬಹುದು’ ಎಂದು ಹೇಳಿದರು.
ಶೃಂಗೇರಿ ಕ್ಷೇತ್ರ ಜೆಡಿಎಸ್ ಘಟಕದ ಅಧ್ಯಕ್ಷ ದಿವಾಕರ ಭಟ್ ಬಂಡಿಗಡಿ, ಮುಖಂಡರಾದ ಎಚ್.ಎಸ್.ಕಳಸಪ್ಪ, ಭರತ್, ದೇವೇಂದ್ರ, ಶ್ರೀನಿವಾಸ್, ಕಲ್ಕಟ್ಟೆ ದಿನೇಶ್ ಹೆಗಡೆ, ಉದಯ್ ಸುವರ್ಣ, ಅಚ್ಚುತ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
