ಚಿಕ್ಕಮಗಳೂರು: ವೈಯಕ್ತಿಕ ಅಪಘಾತ ವಿಮಾ ಮೊತ್ತ ಪಾವತಿಸದ ಎಸ್ಬಿಐ ಮೂಡಿಗೆರೆ ಶಾಖೆ ಹಾಗೂ ಮೈಸೂರಿನ ಟಾಟಾ ಎಐಜಿ ಇನ್ಶೂರೆನ್ಸ್ ಕಂಪನಿಗೆ ₹40 ಸಾವಿರ ಪರಿಹಾರದ ಮತ್ತು ₹17.41 ಲಕ್ಷ ವಿಮೆ ಪಾವತಿಸುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.
ಮೂಡಿಗೆರೆಯ ಕೆಇಬಿ ಕ್ವಾಟ್ರರ್ಸ್ ನಿವಾಸಿ ಸಲ್ಮಾಬಾನು ಅವರ ಪತಿ ಶಫೀಉಲ್ಲಾ ಅವರು ಬಣಕಲ್ ಮೆಸ್ಕಾಂ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಸ್ಟೇಟ್ ಬ್ಯಾಂಕ್ ಇಂಡಿಯಾದ ಮೂಡಿಗೆರೆ ಶಾಖೆಯಲ್ಲಿ ವಿಮೆ ಮಾಡಿಸಿದ್ದರು. ಸೇವೆಯಲ್ಲಿ ಇದ್ದಾಗಲೇ 2022ರ ಆಗಸ್ಟ್ 2ರಂದು ಸಾವಿಗೀಡಾಗಿದ್ದರು.
ಅಪಘಾತ ವಿಮೆಯ ಮೊತ್ತ ನೀಡುವಂತೆ ಪತ್ನಿ ಸಲ್ಮಾಬಾನು ಕೇಳಿದ್ದರು. ನೀಡದ ಕಾರಣ 2024ರ ಆ. 1ರಂದು ಅವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು, ಎಸ್ಬಿಐ ಹಾಗೂ ಟಾಟಾ ಎಐಜಿ ಇನ್ಶೂರೆನ್ಸ್ ಕಂಪನಿ ವೈಯಕ್ತಿಕ ಅಪಘಾತ ವಿಮೆಯ ಮೊತ್ತ ₹17.41 ಲಕ್ಷ, ಪರಿಹಾರವಾಗಿ ₹40 ಸಾವಿರ, ಖರ್ಚು-ವೆಚ್ಚಕ್ಕಾಗಿ ₹10 ಸಾವಿರ ನೀಡಬೇಕು ಎಂದು ಆದೇಶಿಸಿದೆ.
ವಿಮಾ ಮೊತ್ತ ನೀಡದಿರುವುದು ಸೇವಾ ನ್ಯೂನತೆ ಎಂದು ಆಯೋಗದ ಅಧ್ಯಕ್ಷ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಪ್ರೇಮಾ, ಮಂಜುನಾಥ ಎಂ.ಬಮ್ಮನಕಟ್ಟಿ ಆದೇಶದಲ್ಲಿ ತಿಳಿಸಿದ್ದಾರೆ.
