ಚಿಕ್ಕಮಗಳೂರು: ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಬೈಕಿಗೆ ಹಾವು ಅಡ್ಡ ಬಂದ ಪರಿಣಾಮ ಸವಾರ ದಿಢೀರ್ ಬ್ರೇಕ್ ಹಾಕಿದ್ದರಿಂದ ಹಿಂಬದಿ ಕುಳಿತಿದ್ದ ಮಹಿಳೆಯೊಬ್ಬರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಣಾವಾರ-ಸಖರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅರಕೆರೆ ಗ್ರಾಮದ ನಿವಾಸಿ ತಿಲೋತ್ತಮ (39) ಗಾಯಗೊಂಡ ಮಹಿಳೆ. ಈ ಸಂಬಂಧ ಬೈಕ್ ಸವಾರ ಮಧು ಎಂಬುವವರ ವಿರುದ್ಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಲೋತ್ತಮ ಅವರು ಕಡೂರು ತಾಲೂಕಿನ ಬಳ್ಳೇಕೆರೆ ಗ್ರಾಮದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಮಾಡಿಸಲು ಗ್ರಾಮಸ್ಥರ ಕಾರಿನಲ್ಲಿ ತೆರಳಿದ್ದರು. ಪೂಜೆ ಮುಗಿದ ಬಳಿಕ ಸಂಜೆ 6 ಗಂಟೆ ಸಮಯದಲ್ಲಿ ಅದೇ ಗ್ರಾಮದ ಮಧು ಎಂಬುವವರು ಬಳ್ಳೇಕೆರೆ ದೇವಸ್ಥಾನದಿಂದ ತಮ್ಮ ಬೈಕ್ ನಲ್ಲಿ (KA-13 EG-1613) ಅರಕೆರೆಗೆ ವಾಪಸ್ ಹೊರಟಿದ್ದರು.
ಈ ವೇಳೆ ತಿಲೋತ್ತಮ ಅವರು ಮಧು ಅವರ ಬೈಕ್ ಹಿಂಬದಿ ಕುಳಿತು ತೆರಳುತ್ತಿರುವಾಗ ಮಾಚಗೊಂಡನಹಳ್ಳಿ ಗೇಟ್ ಬಳಿ ಹಾವೊಂದು ದಿಢೀರನೆ ರಸ್ತೆಗೆ ಅಡ್ಡ ಬಂದಿದೆ ಹೀಗಾಗಿ ಬೈಕ್ ಚಾಲಕ ಮಧು ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದರಿಂದ ನಿಯಂತ್ರಣ ಸಿಗದೆ ತಕ್ಷಣವೇ ಬ್ರೇಕ್ ಹಾಕಿದ್ದಾರೆ.
ಹೀಗಾಗಿ ಹಿಂಬದಿ ಕುಳಿತಿದ್ದ ತಿಲೋತ್ತಮ ಅವರು ರಸ್ತೆಗೆ ಬಿದ್ದ ಪರಿಣಾಮ ಅವರ ಎರಡು ಕಾಲುಗಳು ಹಾಗೂ ಬಲಭುಜಕ್ಕೆ ತೀವ್ರ ಸ್ವರೂಪದ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಹಾಗೂ ದಾರಿಹೋಕರು ಗಾಯಾಳುವನ್ನು ಬಾಣಾವಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ ಹೀಗಾಗಿ ಸವಾರ ಮಧು ವಿರುದ್ಧ ಸಖರಾಯಪಟ್ಟಣ ಪೊಲೀಸರು ಕೇಸ್ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
