ಚಿಕ್ಕಮಗಳೂರು: ಬೀಗ ಹಾಕಿದ್ದ ಮನೆಯೊಂದರ ಹಿಂಬಾಗಿಲು ಮುರಿದು ಕಳ್ಳತನ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆ.ಬಿ. ಹಾಳ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕಮಲಮ್ಮ ಎಂಬುವರು ಮೇ 19ರಂದು ತಮ್ಮ ಸೊಸೆಯೊಂದಿಗೆ ಹಬ್ಬಕ್ಕಾಗಿ ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಸಾಣೇನಹಳ್ಳಿಯಲ್ಲಿರುವ ಸೊಸೆಯ ತವರುಮನೆಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಈ ಕೃತ್ಯ ಎಸಗಿದ್ದಾರೆ.
ಮೇ 24ರಂದು ಬೆಳಗ್ಗೆ ಕಮಲಮ್ಮ ಅವರ ಪಕ್ಕದ ಮನೆಯಲ್ಲೇ ವಾಸವಿರುವ ಹಿರಿಯ ಮಗ ಯೋಗೀಶ್ ಮನೆ ಬಾಗಿಲು ಮುರಿದಿರುವುದನ್ನು ಗಮನಿಸಿ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ತಕ್ಷಣ ಸಂತ್ರಸ್ತರು ಮನೆಗೆ ಬಂದು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಕಬ್ಬಿಣದ ಬೀರುವಿನ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಮುರಿದು, ಲಾಕರ್ನಲ್ಲಿದ್ದ 38,000 ರೂ ಮೌಲ್ಯದ 7 ಗ್ರಾಂ ಚಿನ್ನಾಭರಣ 2,000 ರೂ ಮೌಲ್ಯದ ಎರಡು ಜೊತೆ ಬೆಳ್ಳಿಯ ಕಾಲು ಚೈನ್ ಹಾಗೂ ದಿವಾನ್ ಕಾಟ್ ಮಾದರಿಯ ಬಾಕ್ಸ್ನಲ್ಲಿ ಬಟ್ಟೆಯೊಳಗೆ ಇಟ್ಟಿದ್ದ 35,000 ರೂ ನಗದು ಸೇರಿದಂತೆ ಒಟ್ಟು 75,000 ರೂ ಮೌಲ್ಯದ ಸ್ವತ್ತನ್ನು ದೋಚಿದ್ದಾರೆ.
ಕಮಲಮ್ಮ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು, ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
