ಚಿಕ್ಕಮಗಳೂರು: ಬೈಕ್ ರೈಡಿಂಗ್ ಎಂದರೆ ಇಂದಿನ ಯುವಕರಿಗೆ ಎಲ್ಲಿಲ್ಲದ ಕ್ರೇಜ್. ಆದರೆ ಆ ವೇಗದ ಮಜಾ ಕೆಲವೊಮ್ಮೆ ಹೆತ್ತವರಿಗೇ ತಲೆ ನೋವು ತರುತ್ತದೆ ಎಂಬುದಕ್ಕೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತಂದೆ ಬುದ್ದಿಮಾತು ಹೇಳಿದರೂ ಕೇಳದೆ ಅತಿವೇಗವಾಗಿ ಬೈಕ್ ಚಲಾಯಿಸಿ ಅಪಘಾತಕ್ಕೆ ಕಾರಣನಾದ ಮಗನ ವಿರುದ್ಧವೇ ತಂದೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮೇ 5ರಂದು ರಾಕೇಶ್ ಎಂಬ ಯುವಕ ತನ್ನ ತಂದೆಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಸ್ಟಾರ್ ಸಿಟಿ ಬೈಕ್ ಏರಿ ಹೊರಟಿದ್ದನು. ಮಗನ ಬೈಕ್ ಚಾಲನೆಯ ಸ್ಪೀಡ್ ನೋಡಿ ಗಾಬರಿಯಾದ ತಂದೆ, “ಗಾಡಿಯನ್ನು ಸ್ವಲ್ಪ ನಿಧಾನವಾಗಿ ಓಡಿಸು ಮಗನೇ..” ಎಂದು ಪದೇ ಪದೇ ಗೋಗರೆದರೂ ವೇಗದ ಅಮಲಿನಲ್ಲಿದ್ದ ಮಗ ಮಾತ್ರ ತಂದೆಯ ಮಾತನ್ನು ಗಾಳಿಗೆ ತೂರಿ ಗಾಡಿಯನ್ನು ಮತ್ತಷ್ಟು ಜೋರಾಗಿ ಮುನ್ನುಗ್ಗಿಸಿದ್ದಾನೆ.
ಬೈಕ್ ಹಾಳೂರು ಬಸವೇಶ್ವರ ದೇವಸ್ಥಾನದ ಬಳಿಯ ರಸ್ತೆಗೆ ಬರುತ್ತಿದ್ದಂತೆ ಹಠಾತ್ತನೆ ನಾಯಿಯೊಂದು ಅಡ್ಡ ಬಂದಿದೆ. ಅತಿವೇಗದಲ್ಲಿದ್ದ ಕಾರಣ ರಾಕೇಶ್ ಗಾಬರಿಯಿಂದ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯಲ್ಲೇ ಸ್ಕಿಡ್ ಆಗಿದ್ದು, ಇಬ್ಬರೂ ಕೆಳಗೆ ಬಿದ್ದಿದ್ದಾರೆ. ರಾಕೇಶ್ ಹೆಟ್ ಧರಿಸಿದ್ದರಿಂದ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆದರೆ ಹೆಟ್ ಧರಿಸದೆ ಹಿಂಬದಿ ಕುಳಿತಿದ್ದ ತಂದೆಯ ಹಣೆ, ಮೂಗು ಹಾಗೂ ದವಡೆ ಹಲ್ಲಿಗೆ ತೀವ್ರ ಗಾಯಗಳಾಗಿತ್ತು. ಹೀಗಾಗಿ ಅವರನ್ನು ತಕ್ಷಣವೇ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದು ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ 13 ದಿನ ಚಿಕಿತ್ಸೆ ಪಡೆದು ಮನೆಗೆ ಮರಳಿದ ತಂದೆಗೆ ಮಗನ ಬೇಜವಾಬ್ದಾರಿತನದ ಮೇಲೆ ತೀವ್ರ ಆಕ್ರೋಶ ಮೂಡಿದೆ.
