ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ 24 ಗಂಟೆ ಆಂಬುಲೆನ್ಸ್ನಲ್ಲೇ ಕಾಲ ಕಳೆದ ಕರುಣಾಜನಕ ಘಟನೆಗೆ ಕಾಫಿನಾಡಲ್ಲಿ ಸಾಕ್ಷಿಯಾಗಿದೆ.
ಹೌದು .. ಆಲ್ದೂರು ಪಟ್ಟಣದಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರವಿ, ಅರೆನೂರು ಗ್ರಾಮದ ಬಳಿ ಸೋಮವಾರ ಬೈಕ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ಆತನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿನ ವೈದ್ಯರು ಮಂಗಳೂರಿಗೆ ರೆಫರ್ ಮಾಡಿದ್ರು. ಆದರೆ ಮಂಗಳೂರಿನ ಫಾದರ್ ಮುಲ್ಲರ್ ಹಾಗೂ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಐಸಿಯು ಬೆಡ್ ಹಾಗೂ ವೈದ್ಯರು ಇಲ್ಲ ಎಂಬ ಕಾರಣ ನೀಡಿ ಕೈತೊಳೆದುಕೊಳ್ಳಲಾಗಿದೆ.
ಅಲ್ಲಿಂದ ಮಂಗಳೂರಿನ ಮುಕ್ಕಾದಲ್ಲಿರುವ ಶ್ರೀನಿವಾಸ ಆಸ್ಪತ್ರೆಗೆ ಕರೆದೊಯ್ದರೆ, ಅಲ್ಲಿನ ಸಿಬ್ಬಂದಿ ಮೊದಲು 80 ಸಾವಿರ ರೂಪಾಯಿ ಹಣ ಕಟ್ಟಿ, ನಂತರ ಚಿಕಿತ್ಸೆ ಆರಂಭಿಸುವ ಷರತ್ತು ವಿಧಿಸಿದ್ದಾರೆ ಬಡ ಕುಟುಂಬದ ಬಳಿ ಅಷ್ಟು ದೊಡ್ಡ ಮೊತ್ತದ ಹಣವಿಲ್ಲದ ಕಾರಣ, ಅನಿವಾರ್ಯವಾಗಿ ಆಂಬುಲೆನ್ಸ್ ನಲ್ಲಿ ಗಾಯಾಳು ಯುವಕನನ್ನು ಮತ್ತೆ ಆಲ್ಲೂರಿಗೆ ವಾಪಸ್ ಕರೆ ತರಲಾಗಿದೆ.
ಮಂಗಳೂರಿನಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಬರೋಬ್ಬರಿ 150 ಕಿಲೋಮೀಟರ್ ತೆರಳಿದ್ರು ಅತ್ತ ಚಿಕಿತ್ಸೆಯೂ ಸಿಗದೆ, ಇತ್ತ ಆಸ್ಪತ್ರೆಗಳಲ್ಲಿ ಬೆಡ್ಗಳೂ ಇಲ್ಲದೆ ಗಾಯಾಳು ಯುವಕ ಆಂಬುಲೆನ್ಸ್ನಲ್ಲೇ ನೋವು ಅನುಭವಿಸುತ್ತಿರುವುದನ್ನು ಕಂಡು ಇಡೀ ಬಡ ಕುಟುಂಬ ಅಸಹಾಯಕರಾಗಿ ಕಣ್ಣೀರು ಹಾಕುತ್ತಿತ್ತು. ಇಡೀ ರಾತ್ರಿ ಮತ್ತು ಹಗಲು ಆಂಬುಲೆನ್ಸ್ನಲ್ಲಿ ನರಕಯಾತನೆ ಅನುಭವಿಸಿದ ಆ ಜೀವ, ಇಂದಿನ ನಾಗರಿಕ ಸಮಾಜ ಮತ್ತು ವೈದ್ಯಕೀಯ ಲೋಕದ ಅಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ.
