ಚಿಕ್ಕಮಗಳೂರು ಮತ್ತು ಕೆ.ಆರ್. ಪೇಟೆ ನಡುವಿನ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಸಿ.ಎಸ್.ಸಿ. ಗುತ್ತಿಗೆ ಸಂಸ್ಥೆಯು ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಬುಧವಾರವಷ್ಟೇ ಗಂಭೀರ ಆರೋಪ ಮಾಡಿದ್ದರು. ಈ ಘಟನೆಯ ಬೆನ್ನಲ್ಲೇ, ಇಂದು ರಸ್ತೆ ಕಾಮಗಾರಿಯ ವಸ್ತುಸ್ಥಿತಿ ವೀಕ್ಷಿಸಲು ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ನೂಕಾಟ ಮತ್ತು ತಳ್ಳಾಟ ನಡೆದಿದೆ.
ಸಿ.ಟಿ. ರವಿ ಅವರು ರಾಂಪುರ ಸರ್ಕಲ್ನಲ್ಲಿ ವಾಹನದಿಂದ ಇಳಿದು ರಸ್ತೆ ಕಾಮಗಾರಿಯನ್ನು ಪರಿಶೀಲಿಸಲು ಮುಂದಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ದಿಢೀರ್ ಆಗಿ ಅಡ್ಡಗಟ್ಟಿದ್ದಾರೆ. ಈ ವೇಳೆ ಉಭಯ ಬಣಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಕಳೆದ 20 ವರ್ಷಗಳಿಂದ ಈ ಭಾಗದಲ್ಲಿ ಯಾವುದೇ ಗಮನಾರ್ಹ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಸಿ.ಟಿ. ರವಿ ಅವರ ವಿರುದ್ಧ ಜೋರಾಗಿ ಧಿಕ್ಕಾರ ಕೂಗಿ ತಮ್ಮ ತೀವ್ರ ಪ್ರತಿರೋಧವನ್ನು ದಾಖಲಿಸಿದ್ದಾರೆ.
ಈ ವೇಳೆ ಗಲಾಟೆ ನಡೆದ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
