ಚಿಕ್ಕಮಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ, ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಈಗ ಪೈಪೋಟಿ ಶುರುವಾಗಿದೆ. ಈ ನಡುವೆ ಮೂರು ವರ್ಷಗಳಿಂದ ಹೊರಗಿನ ಜಿಲ್ಲಾ ಉಸ್ತುವಾರಿ ಸಚಿವರನ್ನು ಕಂಡಿರುವ ಜಿಲ್ಲೆಯ ಜನ, ಈ ಬಾರಿ ಸ್ಥಳೀಯ ಶಾಸಕರಿಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರಾಗಿದ್ದಾರೆ. ಮೂಡಿಗೆರೆ ಮೀಸಲು ಕ್ಷೇತ್ರ, ಚಿಕ್ಕಮಗಳೂರು ಮತ್ತು ಕಡೂರು ಕ್ಷೇತ್ರಗಳನ್ನು ಮೊದಲ ಬಾರಿಗೆ ಶಾಸಕರಾದವರು ಪ್ರತಿನಿಧಿಸುತ್ತಿದ್ದರೆ, ಶೃಂಗೇರಿ ಮತ್ತು ತರೀಕೆರೆ ಕ್ಷೇತ್ರಗಳನ್ನು ಎರಡನೇ ಅವಧಿಗೆ ಶಾಸಕರಾದ ಹಿರಿಯರು ಪ್ರತಿನಿಧಿಸುತ್ತಿದ್ದಾರೆ.

ಮೋಟಮ್ಮ ಅವರು ಕಾಂಗ್ರೆಸ್ ಹಿರಿಯ ನಾಯಕಿ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿ ಕೆಲಸ ಮಾಡಿದವರು. ಎಸ್.ಎಂ. ಕೃಷ್ಣ ಅವರ ಶಿಷ್ಯರಾಗಿರುವ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಂಪರ್ಕ ಚೆನ್ನಾಗಿದೆ. ಶಾಸಕಿ ನಯನಾ ಅವರು ಡಿ.ಕೆ. ಶಿವಕುಮಾರ್ ಬಣದಲ್ಲೇ ಹೆಚ್ಚಾಗಿ ಕಾಣಿಕೊಂಡಿದ್ದರು. ಅವರಿಗೆ ಅವಕಾಶ ಸಿಗುವ ಸಾಧ್ಯತೆಯೂ ಇದೆ ಎಂಬುದು ಕ್ಷೇತ್ರ ಜನರ ನಿರೀಕ್ಷೆ.
ಇನ್ನು ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಅವರು ಕೂಡ ಎರಡು ಬಾರಿ ಗೆದ್ದಿರುವ ಶಾಸಕ. ಮೊದಲಿಗೆ ಕಾಂಗ್ರೆಸ್ನಿಂದ ಗೆದ್ದು ಶಾಸಕರಾಗಿದ್ದರು. 2018ರಲ್ಲಿ ಕಾಂಗ್ರೆಸ್ ಟಿಕೆಟ್ ದೊರೆಯದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. 2023ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದಿದ್ದಾರೆ. ಕುರುಬ ಸಮುದಾಯಕ್ಕೆ ಅವಕಾಶ ನೀಡುವ ಸಂದರ್ಭಬಂದರೆ ಹಿರಿತನದಲ್ಲಿ ಶ್ರೀನಿವಾಸ್ ಇದ್ದಾರೆ. ಕಡೂರು ಕ್ಷೇತ್ರ ಕೆ.ಎಸ್. ಆನಂದ್ ಅವರು ಅದೇ ಸಮುದಾಯಕ್ಕೆ ಸೇರಿದವರು. ಇವರು ಡಿ.ಕೆ. ಶಿವಕುಮಾರ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ ಎನ್ನುವ ಮಾತುಗಳಿವೆ.
ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕುವ ಅವಕಾಶ ಬಂದರೆ ಚಿಕ್ಕಮಗಳೂರು ಕ್ಷೇತ್ರದ ಎಚ್.ಡಿ. ತಮ್ಮಯ್ಯ ಹೆಸರು ಮುನ್ನೆಲೆಗೆ ಬರಲಿದೆ. ಇವರು ಕೂಡ ಡಿ.ಕೆ. ಶಿವಕುಮಾರ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಜಿಲ್ಲೆಗೆ ಸಚಿವ ಸ್ಥಾನ ಈ ಬಾರಿಯಾದರೂ ದೊರಕಬೇಕು. ಎರಡು ಬಾರಿ ಗೆದ್ದಿರುವ ಹಿರಿಯರಿಗೆ ಅವಕಾಶ ಸಿಗಲಿ ಎಂದು ಅವರೇ ಬುಧವಾರ ಹೇಳಿಕೆ ನೀಡಿದ್ದಾರೆ.
ಹಿರಿತನದ ಲೆಕ್ಕಾಚಾರದಲ್ಲಿ ಅವಕಾಶ ಸಿಗುವುದಾದರೆ ಸತತ ಎರಡನೇ ಬಾರಿಗೆ ಶಾಸಕರಾಗಿರುವ ಟಿ.ಡಿ. ರಾಜೇಗೌಡ ಹೆಸರು ಮುನ್ನೆಲೆಗೆ ಬರಲಿದೆ
