ಚಿಕ್ಕಮಗಳೂರು: ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನ ಪ್ರಕರಣದ ಕುರಿತು ಬಿಜೆಪಿ ರಾಜ್ಯ ಘಟಕವು ರಚಿಸಿರುವ ಸತ್ಯಶೋಧನ ಸಮಿತಿಯ ವರದಿ ಈಗಾಗಲೇ ಸಿದ್ಧವಾಗಿದ್ದು, ಅದನ್ನು ಸೀಲ್ಡ್ ಕವರ್ನಲ್ಲಿ ಇಡಲಾಗಿದೆ ಎಂದು ಪರಿಷತ್ ಸದಸ್ಯ ಸಿ. ಟಿ. ರವಿ ತಿಳಿಸಿದರು.
ಈ ಕುರಿತಂತೆ ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷರು ಪ್ರಸ್ತುತ ದೆಹಲಿಗೆ ತೆರಳಿದ್ದು, ನಾಳೆ ಸಂಜೆ ಬೆಂಗಳೂರಿಗೆ ಮರಳಲಿದ್ದಾರೆ. ಅವರೊಂದಿಗೆ ಸಮಿತಿ ಸದಸ್ಯರಾದ ಮೂವರು ಭೇಟಿ ಮಾಡಿ ವರದಿಯನ್ನು ಸಲ್ಲಿಸಲಿದ್ದೇವೆ ಎಂದು ಹೇಳಿದರು.
“ನಾವು ವಿವಿಧ ವ್ಯಕ್ತಿಗಳೊಂದಿಗೆ ನಡೆಸಿದ ಚರ್ಚೆಗಳು, ನಮಗೆ ಲಭ್ಯವಾದ ಮಾಹಿತಿ ಹಾಗೂ ಸಾಂದರ್ಭಿಕ ಅಂಶಗಳ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸಿದ್ದೇವೆ. ವರದಿ ಹೇಗೆ ತಯಾರಿಸಲಾಗಿದೆ ಎಂಬುದನ್ನು ಅಧ್ಯಕ್ಷರ ಮುಂದೆ ವಿವರಿಸಿ ನಂತರ ಸಲ್ಲಿಸಲಾಗುವುದು. ಯಾವುದೇ ಸಂಗತಿಯನ್ನು ಸಾರ್ವಜನಿಕವಾಗಿ ಚರ್ಚಿಸಲು ನಾವು ಬಯಸುವುದಿಲ್ಲ,” ಎಂದು ಸಿ ಟಿ ರವಿ ಸ್ಪಷ್ಟಪಡಿಸಿದರು.
