ಮೂಡಿಗೆರೆ: ತಾಲೂಕಿನ ಬಣಕಲ್ ಸಮೀಪದ ದಾಸರಹಳ್ಳಿ ಗ್ರಾಮದ ಹರ್ಷ ಮೆಲ್ವಿನ್ ಲಸ್ರಾದೊ ಅವರಿಗೆ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಕರ್ನಾಟಕ ಕ್ರೈಸ್ತರ ಮಹಾ ಸಮಾವೇಶ ಮತ್ತು 70ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ‘ಕರ್ನಾಟಕ ಕ್ರೈಸ್ತ ರತ್ನ 2025’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಹರ್ಷ ಮೆಲ್ವಿನ್ ಲಸ್ರಾದೊ ಅವರು ಬಣಕಲ್ ಕ್ರೈಸ್ತ ಅಭಿವೃದ್ದಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಳಿಕ ಕ್ರೈಸ್ತರ ಅಭಿವೃದ್ದಿ ನಿಗಮದ ರಾಜ್ಯ ನಿರ್ದೇಶಕರಾಗಿ ಅಲ್ಪ ಸಂಖ್ಯಾತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯದ ಮಾಹಿತಿ ನೀಡುತ್ತಾ ಕ್ರೈಸ್ತ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗುವಂತೆ ಮಾಡಲು ವಿವಿಧ ಜಿಲ್ಲೆಯಾದ್ಯಂತ ಚರ್ಚು ಹಾಗೂ ಸಮುದಾಯ ಭವನಗಳಲ್ಲಿ ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡು ಸಾರ್ವಜನಿಕ ಜೀವಿತದ ಸಾರ್ಥಕ ಸೇವೆ ನೀಡುತ್ತಾ ಬಂದಿದ್ದಾರೆ.
ಕ್ರೈಸ್ತ ಸಮುದಾಯದಲ್ಲಿ ಅವರ ಅಪಾರ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಬೆಂಗಳೂರು ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪೃಥ್ವೀಲಾಲ್, ಸಂಸ್ಥಾಪಕ ಬಾಸ್ಕರ್ ಬಾಬು, ಪಾತರಪಲ್ಲಿ, ಸಮಾಜ ಸೇವಕ ಗುರುದಾಸ್, ವೆಂಕಟೇಶ್, ಕ್ರೈಸ್ತ ರಕ್ಷಣಾ ವೇದಿಕೆಯ ಎಲ್ಲಾ ಪದಾಧಿಕಾರಿಗಳು, ಧಾರ್ಮಿಕ ಗುರುಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.
