ಚಿಕ್ಕಮಗಳೂರು: ಈ ಬಾರಿ ಚಿಕ್ಕಮಗಳೂರು (Chikkamagaluru) ನಗರದಲ್ಲಿ ಅದ್ದೂರಿ ಗಣೇಶ ಹಬ್ಬ (Ganesha Festival) ಆಚರಣೆಗೆ ಹಿಂದೂ ಮಹಾ ಗಣಪತಿಯ (Hindu Mahasabha Ganapati) ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಹಿಂದೆಂದಿಗಿಂತಲೂ ವಿಜೃಂಬಣೆಯಿಂದ ಗಣೇಶ ಚತುರ್ಥಿ ನಡೆಯಲಿದೆ.
ಈ ವರ್ಷ ಹತ್ತಾರು ಭಕ್ತರು ಸೇರಿ ಗಣಪತಿಗೆ ಸುಮಾರು 12 ಲಕ್ಷ ರೂ.ಗೂ ಹೆಚ್ಚು ಮೌಲ್ಯದ 5 ಕೆಜಿ ಬೆಳ್ಳಿ ಕಿರೀಟ ಹಾಗೂ ಆಯುಧಗಳನ್ನ ಮಾಡಿಸಿಕೊಟ್ಟಿದ್ದಾರೆ. 4 ಕೆಜಿ ತೂಕದ ಬೆಳ್ಳಿಯ ಕಿರೀಟ ಹಾಗೂ 1 ಕೆಜಿಯ ತೂಕದ ಎರಡು ಬೆಳ್ಳಿಯ ಆಯುಧಗಳನ್ನ ಮಾಡಿಸಿಕೊಡಲಾಗಿದೆ. ಈ ಬೆಳ್ಳಿಯ ಆಭರಣಗಳನ್ನು ಹಿಂದೂ ಮಹಾ ಗಣಪತಿ ಆಡಳಿತ ಮಂಡಳಿಯ ಕಾರ್ಯಕರ್ತರು ಶೃಂಗೇರಿಯಿಂದ ಪೂಜೆ ಮಾಡಿಸಿ ತಂದಿದ್ದಾರೆ.
ಕಿರೀಟಕ್ಕೆ ಶೃಂಗೇರಿಯ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥ ಶ್ರೀಗಳು ಪೂಜೆಗೈದು ಪುಷ್ಪಾರ್ಚನೆ ಮಾಡಿ ಕೊಟ್ಟಿದ್ದಾರೆ. ಇದೇ ವೇಳೆ, ಹಿಂದೂ ಮಹಾ ಗಣಪತಿಯ ಆಡಳಿತ ಮಂಡಳಿ ಶೃಂಗೇರಿ ಶ್ರೀಗಳಿಗೂ ಕೂಡ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.
ಈ ಬಾರಿ ಒಟ್ಟು 11 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ವಿಘ್ನಗಳ ನಿವಾರಕ ವಿಘ್ನೇಶ್ವರ ಭಕ್ತ ಸಮೂಹಕ್ಕೆ ಬೆಳ್ಳಿ ಕಿರೀಟ ಹಾಗೂ ಆಯುಧಗಳ ಸಮೇತ ಆಶೀರ್ವಾದ ಮಾಡಲಿದ್ದಾನೆ. 12 ವರ್ಷಗಳಿಂದ ಪ್ರತಿ ವರ್ಷವೂ ಒಂದೊಂದು ರೀತಿಯ ವಿಭಿನ್ನವಾಗಿ ಹಬ್ಬ ಆಚರಣೆ ಮಾಡುವ ಆಡಳಿತ ಮಂಡಳಿ, ಈ ಬಾರಿ ಕೂಡ ಮತ್ತಷ್ಟು ವಿಭಿನ್ನ ಹಾಗೂ ವಿಜೃಂಬಣೆಯಿಂದ ಗಣೇಶನ ಹಬ್ಬದ ಆಚರಣೆಗೆ ಮುಂದಾಗಿದೆ.
