ಸಕಲೇಶಪುರ: ಕಳೆದ ವರ್ಷ ಸಕಲೇಶಪುರ ತಾಲೂಕಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ವೇಳೆ ಉಂಟಾಗಿದ್ದ ಕೆಲವು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಪ್ರತ್ಯೇಕ ಸಂಘದ ಅಧ್ಯಕ್ಷ ಹುರಡಿ ವಿಕ್ರಮ್ ಹಾಗೂ ಉಪಾಧ್ಯಕ್ಷ ಹೆತ್ತೂರು ಮಲ್ಲೇಶ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುರಡಿ ವಿಕ್ರಮ್, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಸಂದರ್ಭದಲ್ಲಿ ಕೆಲವು ವಿಚಾರಗಳಲ್ಲಿ ಅಸಮಾಧಾನ ಉಂಟಾಗಿದ್ದ ಕಾರಣ ಪ್ರತ್ಯೇಕ ಸಂಘವನ್ನು ರಚಿಸಲಾಗಿತ್ತು. ಅದರ ಅಧ್ಯಕ್ಷನಾಗಿ ತಾವು ಹಾಗೂ ಉಪಾಧ್ಯಕ್ಷನಾಗಿ ಹೆತ್ತೂರು ಮಲ್ಲೇಶ್ ಕಾರ್ಯನಿರ್ವಹಿಸುತ್ತಿದ್ದೆವು ಎಂದು ತಿಳಿಸಿದರು.
ಆದರೆ ಇತ್ತೀಚಿನ ದಿನಗಳಲ್ಲಿ ಮುಖ್ಯ ಸಂಘದ ಕಾರ್ಯವೈಖರಿ, ಸಂಘಟನಾ ಚಟುವಟಿಕೆಗಳು ಹಾಗೂ ಸಮಾಜದ ಹಿತದೃಷ್ಟಿಯಿಂದ ಕೈಗೊಂಡಿರುವ ಕಾರ್ಯಕ್ರಮಗಳನ್ನು ಗಮನಿಸಿದ ಬಳಿಕ ತಮ್ಮಲ್ಲಿದ್ದ ಎಲ್ಲ ಅಸಮಾಧಾನಗಳು ನಿವಾರಣೆಯಾಗಿವೆ ಎಂದು ಹೇಳಿದರು.
“ಮುಖ್ಯ ಸಂಘದ ಕಾರ್ಯವೈಖರಿಯಿಂದ ನಮಗೆ ತೃಪ್ತಿ ಹಾಗೂ ಸಂತೋಷವಾಗಿದೆ. ಆದ್ದರಿಂದ ನಾವು ರಚಿಸಿದ್ದ ಪ್ರತ್ಯೇಕ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದೇವೆ. ಇನ್ನು ಮುಂದೆ ಆ ಸಂಘದೊಂದಿಗೆ ನಮಗೆ ಯಾವುದೇ ಸಂಬಂಧ ಇರುವುದಿಲ್ಲ. ಸಮಾಜದ ಒಗ್ಗಟ್ಟು ಹಾಗೂ ಅಭಿವೃದ್ಧಿಯೇ ನಮ್ಮ ಆದ್ಯತೆಯಾಗಿದ್ದು, ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂಬುದು ನಮ್ಮ ಆಶಯ” ಎಂದು ಹುರುಡಿ ವಿಕ್ರಮ್ ಹೇಳಿದರು.
ಈ ಬೆಳವಣಿಗೆಯಿಂದ ಸಕಲೇಶಪುರದ ಕೆಂಪೇಗೌಡ ಸಮುದಾಯದ ಸಂಘಟನೆಗಳಲ್ಲಿ ಹೊಸ ರಾಜಕೀಯ ಹಾಗೂ ಸಂಘಟನಾ ಬೆಳವಣಿಗೆಗೆ ನಾಂದಿ ಹಾಡಿದಂತಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿಗೆ ಕೈಜೋಡಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.
