ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಗೋರಿಗುಡ್ಡದಲ್ಲಿ ಒಂದು ಕೋಟಿ 84 ಲಕ್ಷ ಖರ್ಚು ಮಾಡಿ ಕೇವಲ 2 ತಿಂಗಳ ಹಿಂದೆ ಕಟ್ಟಿದ್ದ ತಡೆಗೋಡಿ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಹಂತಕ್ಕೆ ತಲುಪಿದೆ.

ಕಳಪೆ ಕಾಮಗಾರಿಯೇ ಈ ದುಸ್ಥಿತಿಗೆ ಕಾರಣ ಅಂತಾ ಜನಾಕ್ರೋಶ ವ್ಯಕ್ತವಾಗಿದ್ದು, ಜನಸಮಾನ್ಯರ ತೆರಿಗೆ ಹಣವನ್ನ ಈ ರೀತಿ ಬಳಸಿಕೊಳ್ಳುತ್ತಿರುವುದಕ್ಕೂ ಸಾರ್ವಜನಿಕರು ಕಿಡಿಕಾರಿದ್ದಾರೆ.
ಇನ್ನೂ ಸ್ಥಳಕ್ಕೆ ಮಾಜಿ ಶಾಸಕ ಡಿ.ಎನ್ ಜೀವರಾಜ್ ಭೇಟಿ ನೀಡಿ, ಏಕಾಏಕಿ ತಡೆಗೋಡೆ ಕುಸಿದು ಅಮಾಯಕ ಜೀವಗಳು ಬಲಿಯಾದ್ರೆ ಯಾರು ಹೊಣೆ ಎಂದು ಪ್ರಶ್ನಿಸಿದ್ರು. ಅಷ್ಟೇ ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ತಡೆಗೋಡೆಯ ಕೆಳಭಾಗದಲ್ಲಿ ನಾಲ್ಕು ಮನೆಗಳು ಮತ್ತು 18ಕ್ಕೂ ಹೆಚ್ಚು ಅಂಗಡಿಗಳಿವೆ. ಒಂದು ವೇಳೆ ತಡೆಗೋಡೆ ಕುಸಿದರೆ ಈ ಕಟ್ಟಡಗಳಿಗೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆ ಇದೆ.
ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದನ್ನು ದೃಢಪಡಿಸಿರುವ ಶೃಂಗೇರಿ ತಹಶೀಲ್ದಾರ್ ಅನುಪ್, ಮುಂಜಾಗ್ರತಾ ಕ್ರಮವಾಗಿ ಕೆಳಭಾಗದಲ್ಲಿರುವ ಮನೆಗಳು ಮತ್ತು ಅಂಗಡಿಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ತಡೆಗೋಡೆಯ ಒಳಭಾಗದಲ್ಲಿ ಕೇವಲ ಮಣ್ಣು ತುಂಬಿ ಕಳಪೆ ಕಾಮಗಾರಿ ನಡೆಸಿರುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಾಯದ ಮುನ್ಸೂಚನೆ ಇದ್ದರೂ ಜಿಲ್ಲಾಡಳಿತ ಇದುವರೆಗೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
