ಮಂಗಳೂರು: ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಿವಮೊಗ್ಗ-ಮಂಗಳೂರು ರೈಲು ಮಾರ್ಗ 332 ಕಿ.ಮೀ. ಇರಲಿದ್ದು, 3,300 ಕೋಟಿ ರು. ಯೋಜನಾ ವೆಚ್ಚ ಅಂದಾಜಿಸಲಾಗಿದೆ. ಈ ಮಾರ್ಗದ ಎಫ್ಎಲ್ಸಿ(ಫೈನಲ್ ಲೊಕೇಷನ್ ಸರ್ವೆ) ನಡೆದು ಅನುಮೋದನೆಗೊಂಡಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದರು. ಹಾಸನ-ಮಂಗಳೂರು ನಡುವೆ 247 ಕಿ.ಮೀ. ರೈಲು ಹಳಿಯನ್ನು 8,300 ಕೋಟಿ ರು.ಗಳಲ್ಲಿ ದ್ವಿಗುಣಗೊಳಿಸುವ ಕಾರ್ಯದ ಎಫ್ಎಲ್ಸಿ ಪರಿಶೀಲನಾ ಹಂತದಲ್ಲಿದೆ ಎಂದರು.
ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗ ಸೃಜಿಸುವ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕೂ ಮುನ್ನ ಮಂಗಳೂರು ಒಳಗೊಂಡಿರುವ ಕೊಂಕಣ, ನೈರುತ್ಯ ಹಾಗೂ ದಕ್ಷಿಣ ರೈಲ್ವೆ ಈ ಮೂರು ವಿಭಾಗಗಳಲ್ಲಿ ಮಂಗಳೂರಿನ ಒಂದೇ ವಿಭಾಗದಡಿ ತರುವ ಬಗ್ಗೆ ಕೆಲಸ ಕಾರ್ಯಗಳು ನಡೆಯುತ್ತಿವೆ. ಆದಷ್ಟು ಶೀಘ್ರದಲ್ಲಿ ಈ ಬೇಡಿಕೆ ನೆರವೇರಲಿದೆ ಎಂದರು.
