ಮೂಡಿಗೆರೆ: ಲೀಸಾ ಪೌಂಡೇಷನ್ ಸಂಸ್ಥಾಪಕಿ ಸಂಗೀತಾ ಪ್ರಸಾದ್ ಅವರು ತನ್ನ ಮೇಲೆ ಹಾಗೂ ಶಾಸಕರ ಮೇಲೆ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿರುವುದು ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕುನ್ನಳ್ಳಿ ರವಿ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾನು ಸುಮಾರು 30 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವೆ ಮೋಟಮ್ಮ, ಮಾಜಿ ಸಂಸದರಾದ ಡಿ.ಎಂ.ಪುಟ್ಟೇಗೌಡ, ಡಿ.ಕೆ.ತಾರಾದೇವಿ ಅವರ ಮಾರ್ಗದರ್ಶನದೊಂದಿಗೆ, ಅಲ್ಲದೇ ಗ್ರಾ.ಪಂ ಅಧ್ಯಕ್ಷನಾಗಿ, ಬಾಲಕೀಯರ ಪದವಿ ಪೂರ್ವ ಪ್ರೌಢಶಾಲೆ ವಿಭಾಗದಲ್ಲಿ ಎಸ್ಡಿಎಂಸಿ ಅಧ್ಯಕ್ಷನಾಗಿ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹಾಗಾಗಿ ಶಾಸಕರು ತನಗೆ ಕೆಪಿಎಸ್ ಶಾಲೆಯಲ್ಲಿ ಕೋಶಾಧ್ಯಕ್ಷ ಹುದ್ದೆ ನೀಡಿದ್ದಾರೆ. ತನ್ನ ವಿರುದ್ಧ ಹಾಗೂ ಕ್ಷೇತ್ರದಲ್ಲಿ ಉತ್ತಮವಾಗಿ ಅಭಿವೃದ್ಧಿ ಕೆಲಸ ಮಾಡುತ್ತಿರುವ ಶಾಸಕರು ಭ್ರಷ್ಟಾಚಾರ ಮಾಡಿದ್ದರೆ, ಅದನ್ನು ಸಂಗೀತ ಪ್ರಸಾಧ್ ಅವರು ಸಬೀತು ಮಾಡಬೇಕೆಂದು ಸವಾಲು ಹಾಕಿದ ಅವರು, ಈ ರೀತಿ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕೆಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಬಿ.ಶಂಕರ್ ಮಾತನಾಡಿ, ಈ ಸಮಾಜದಲ್ಲಿ ಪ್ರಚಾರ ಪಡೆಯಬೇಕೆಂದರೆ 2 ದಾರಿಯಿದೆ. ಅದು ಸಾಮಾಜಿಕ ಸೇವೆ ಮಾಡಬೇಕು. ಇಲ್ಲವಾದರೆ ಜನಪ್ರತಿನಿಧಿಗಳ ಮೇಲೆ ವಿನಾಕಾರಣ ಸುಳ್ಳು ಹೇಳಿಕೊಂಡು ಆರೋಪ ಮಾಡಿದಾಗ ಮಾತ್ರ ಪ್ರಚಾರ ಸಿಗುತ್ತದೆ. ಆದರೆ ಸಂಗೀತ ಪ್ರಸಾಧ್ ಅವರು ಶಾಸಕಿ ನಯನಾ ಮೋಟಮ್ಮ ಅವರ ಹೆಸರು ಬಳಸಿಕೊಂಡು ಇಲ್ಲಸಲ್ಲದ ಆರೋಪ ಮಾಡುತ್ತಾ ಬಿಟ್ಟಿ ಪ್ರಚಾರ ಪಡೆಯಲು ಮುಂದಾಗಿರುವುದು ಸರಿಯಲ್ಲ. ತಾನೊಬ್ಬ ಸಹೋದರನಾಗಿ ಒಂದು ಕಿವಿ ಮಾತು ಹೇಳುವೆ. ನಿಮ್ಮ ಎಂಬ ಹೆಸರಿನಲ್ಲಿ ಸಂಗೀತ ಅಡಗಿದೆ. ಅದರಲ್ಲಿ ನಾದ, ಶೃತಿ, ಲಯ ತಪ್ಪಿ ಹೋಗುತ್ತಿದೆ. ಇದನ್ನು ಸರಿಪಡಿಸಕೊಂಡರೆ ಸುಮದುರ ಸಂಗೀತ ಕಾಣಲು ಸಾಧ್ಯವಿದೆ ಎಂದು ವ್ಯಂಗ್ಯವಾಡಿದರು.
ಗೋಷ್ಠಿಯಲ್ಲಿ ಮುಖಂಡರಾದ ರಮೇಶ್ ಹೊಸ್ಕೆರೆ, ಸಂಪತ್ ಬಿಳಗುಳ, ರಘು ಮಗ್ಗಲಮಕ್ಕಿ, ದೀಕ್ಷಿತ್ ಕಣಚೂರು, ಯಾಕೂಬ್, ಸುಬೋಧ್ ಬಿದರಹಳ್ಳಿ, ಸುರೇಂದ್ರ ಉಗ್ಗೇಹಳ್ಳಿ ಉಪಸ್ಥಿತರಿದ್ದರು.
