ಬೆಂಗಳೂರು: ಮಾನಸಿಕ ಕಿರುಕುಳ, ಲಂಚದ ಬೇಡಿಕೆಯಿಂದ ಬೇಸತ್ತು ಸಾಫ್ಟ್ವೇರ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನಲ್ಲೂರಹಳ್ಳಿಯಲ್ಲಿ ನಡೆದಿದೆ. ಮಾಜಿ ಸಾಫ್ಟ್ವೇರ್ ಇಂಜಿನಿಯರ್ ಮುರಳಿ ಗೋವಿಂದರಾಜು ನಿರ್ಮಾಣ ಹಂತದ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗರಿಕ ಸಂಸ್ಥೆಯ ಅಧಿಕಾರಿಗಳಿಂದ ಕಿರುಕುಳ ಮತ್ತು ಹಿಂಸೆ ನೀಡಲಾಗಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತರಾದ ಮುರಳಿ ಗೋವಿಂದರಾಜು ಅವರ ತಾಯಿ, ಇಬ್ಬರು ವ್ಯಕ್ತಿಗಳಿಂದ ನಿರಂತರ ಕಿರುಕುಳ ಮತ್ತು ಅಕ್ರಮ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ಮುರಳಿ ಅವರು ಪತ್ನಿ ದುರ್ಗಾದೇವಿ ಮತ್ತು ಮಕ್ಕಳು ಕನಿಷ್ಠ ಮತ್ತು ದೇಶಿತಾ ಅವರೊಂದಿಗೆ ವಾಸಿಸುತ್ತಿದ್ದು. 2018 ರಲ್ಲಿ ನಲ್ಲೂರಹಳ್ಳಿಯಲ್ಲಿ ಸಂಬಂಧಿಕರಿಂದ ಒಂದು ನಿವೇಶನವನ್ನು ಖರೀದಿಸಿದ್ದರು. ಆ ಜಾಗದಲ್ಲಿಯೇ ಮನೆ ಕಟ್ಟಿಸುತ್ತಿದ್ದರು. ಮನೆ ಹಾಗೂ ನಿವೇಶನದ ವಿಚಾರಲದಲ್ಲಿ ರೂಲ್ಸ್ ಸರಿಯಾರಿ ನಿಭಾಯಿಸಿಲ್ಲ ಎಂದು ಗದರಿಸಿ ಅಕ್ಟೋಬರ್ 25ರಿಂದ, ಉಷಾ ನಂಬಿಯಾರ್ ಮತ್ತು ಶಶಿ ನಂಬಿಯಾರ್ ಎಂಬ ಇಬ್ಬರು ವ್ಯಕ್ತಿಗಳು ಮುರಳಿಯವರನ್ನು ಹಲವು ಬಾರಿ ಭೇಟಿ ಮಾಡಿ, 20 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಮುರಳಿ ಹಣ ನೀಡಲು ನಿರಾಕರಿಸಿದಾಗ, ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಕೆಲವು ಅಧಿಕಾರಿಗಳೊಂದಿಗೆ , ನಿರ್ಮಾಣ ಸ್ಥಳಕ್ಕೆ ಪದೇ ಪದೇ ಭೇಟಿ ನೀಡಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ದಿನ, ಮುರಳಿಯವರಿಗೆ ಹಣ ಪಾವತಿಸುವಂತೆ ಮತ್ತೆ ಒತ್ತಡ ಹೇರಲಾಗಿತ್ತು. ಇದರಿಂದ ತೀವ್ರವಾಗಿ ನೊಂದ ಮುರಳಿ ಅವರು ಬೆಳಿಗ್ಗೆ 6 ಗಂಟೆ ಸುಮಾರಿಗೆ ಮನೆಯಿಂದ ಹೊರಟು, ನಿರ್ಮಾಣ ಹಂತದ ಕಟ್ಟಡಕ್ಕೆ ಹೋಗಿದ್ದಾರೆ. ಅಲ್ಲಿ ಅವರು ಸೀಲಿಂಗ್ ಫ್ಯಾನ್ಗೆ ಹಾಕಲಾಗಿದ್ದ ಕಬ್ಬಿಣದ ಕೊಕ್ಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 9:30 ರ ಸುಮಾರಿಗೆ ಕೆಲಸಕ್ಕೆ ಬಂದ ಗಣೇಶ ಎಂಬುವವರು ಕೆಲಸಕ್ಕೆಂದು ತೆರಳಿದಾಗ ಮೃತ ದೇಹ ಕಂಡು ಕುಟುಂಬಕ್ಕೆ ತಿಳಿಸಿದ್ದಾರೆ.
ಮುರಳಿಯವರ ತಾಯಿ, ಉಷಾ ಮತ್ತು ಶಶಿ ವಿರುದ್ಧ ಕಿರುಕುಳ ಮತ್ತು ಮಗನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
