ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಅಸ್ಸಾಂ ಕಾರ್ಮಿಕರ ನೆಪದಲ್ಲಿ ಬಾಂಗ್ಲಾ ಅಕ್ರಮ ವಲಸಿಗರು ಆಶ್ರಯ ಪಡೆದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಜರಂಗದಳ ಮತ್ತು ವಿಎಚ್ಪಿ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಕಾರ್ಮಿಕರ ಗುರುತು ಪತ್ರಗಳನ್ನು ಪರಿಶೀಲಿಸಿದ್ದಕ್ಕೆ, 9 ಮಂದಿ ಕಾರ್ಯಕರ್ತರ ವಿರುದ್ಧ ಮೂಡಿಗೆರೆ ಪೊಲೀಸರು ಸುಮೋಟೋ ದಾಖಲಿಸಿ ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರು ಬಜರಂಗದಳ ಮುಖಂಡ ಸುದೇವ್, ಸಂತೋಷ್, ಪ್ರಶಾಂತ್, ನಿತಿನ್, ಅನಿಲ್ ಪೂಜಾರಿ, ಶಶಿ
ಪ್ರಣೀತ್, ಚೇತನ್, ಅಭಿಷೇಕ್ ಸೇರಿ ಒಟ್ಟು 9 ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಶುಕ್ರವಾರ ಮೂಡಿಗೆರೆ ಪಟ್ಟಣದಲ್ಲಿ ವಾರದ ಸಂತೆಗೆ ಕಾರ್ಯಕರ್ತರು ಏಕಾಏಕಿ ಪ್ರವೇಶಿಸಿ ಅಸ್ಸಾಂ ಮೂಲದ ಕಾರ್ಮಿಕರ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ದಾಖಲೆಗಳನ್ನು ಪರಿಶೀಲಿಸಿದ್ದು, ಇದರಿಂದ ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾಗಿತ್ತು.
ಬಾಂಗ್ಲಾದೇಶದಲ್ಲಿ ದೀಪು ಎಂಬಾತನ ಬರ್ಬರ ಹತ್ಯೆ ನಡೆದ ಹಿನ್ನೆಲೆ, ಕೆಲವು ದಿನಗಳ ಹಿಂದೆ ಬಜರಂಗದಳ ಮತ್ತು ವಿಹೆಚ್ಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇರುವ ಅಸ್ಸಾಂ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು. ಈ ಕುರಿತು ಒಂದು ವಾರದ ಗಡುವನ್ನೂ ನೀಡಲಾಗಿತ್ತು.
