ಶೃಂಗೇರಿ: ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಮಕ್ಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಬೈಕ್ ಅಪಘಾತ ಸಂಭವಿಸಿ ಪ್ರದೀಪ್ (28) ಎಂಬುವರು ಮೃತಪಟ್ಟಿದ್ದಾರೆ.
ಪ್ರದೀಪ್ ಅವರು ತಮ್ಮ ಸ್ನೇಹಿತ ಮಹೇಶ್ ಎಂಬುವರ ಜೊತೆ ಬೈಕ್ನಲ್ಲಿ ಕಾರ್ಕಳಕ್ಕೆ ಸಂಬಂಧಿಕರ ಮನೆಗೆ ಹೊರಟಿದ್ದರು. ಮಹೇಶ್ ಬೈಕ್ ಚಲಾಯಿಸುತ್ತಿದ್ದು, ಪ್ರದೀಪ್ ಹಿಂಬದಿ ಕುಳಿತಿದ್ದರು. ಎದುರಿನಿಂದ ಬಂದ ಲಾರಿಗೆ ಸೈಡ್ ಕೊಡಲು ಹೋಗಿ, ಮಹೇಶ್ ಬೈಕನ್ನು ಅಜಾಗರೂಕತೆಯಿಂದ ಚಾಲನೆ ಮಾಡಿದ ಕಾರಣ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ.
ತಲೆಯ ಹಿಂಭಾಗಕ್ಕೆ ಬಲವಾದ ಪೆಟ್ಟು ಬಿದ್ದು ರಕ್ತಗಾಯಗೊಂಡಿದ್ದ ಪ್ರದೀಪ್ ಅವರನ್ನು ಶೃಂಗೇರಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ. ಮೃತರ ತಾಯಿ ಶಾರದಾ ನೀಡಿದ ದೂರಿನನ್ವಯ ಬೈಕ್ ಚಾಲಕ ಮಹೇಶ್ ವಿರುದ್ಧ ಪ್ರಕರಣ ದಾಖಲಾಗಿದೆ
