ಚಿಕ್ಕಮಗಳೂರು: ಮದ್ಯದ ಅಮಲಿನಲ್ಲಿ ಪಾಪಿ ಪುತ್ರನಿಂದ ತನ್ನ ತಾಯಿಯ ಮೇಲೆಯೇ ಮುದ್ದೆ ಕೋಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಸಾದರಹಳ್ಳಿಯಲ್ಲಿ ನಡೆದಿದೆ.
65 ವರ್ಷದ ಅನಸೂಯ ಅವರು ಅಡುಗೆ ಮನೆಯಲ್ಲಿ ಅನ್ನ ಸಿದ್ಧಪಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಪಾತ್ರೆ ಬಿದ್ದ ಶಬ್ದ ಕೇಳಿಬಂದಿದೆ. ಇದೇ ವೇಳೆ ಮದ್ಯ ಸೇವಿಸಿದ್ದ ಪುತ್ರ ಮಧು ಜಗಳ ಆರಂಭಿಸಿ, ನನ್ನ ಜೇಬಿನಿಂದ ಹಣ ಕದ್ದಿದ್ದೀಯಾ ಎಂದು ತಾಯಿಯ ಮೇಲೆ ಸುಳ್ಳು ಆರೋಪ ಮಾಡಿ ಕೋಪಗೊಂಡ ಮಧು ಮುದ್ದೆ ಕೋಲು ತೆಗೆದುಕೊಂಡು ತಾಯಿಯ ತಲೆಗೆ ಹೊಡೆದು ಗಾಯಗೊಳಿಸಿದ್ದು, ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ.
ಅನಸೂಯ ಅವರ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಅಳಿಯ ಸಂತೋಷ್ ಕುಮಾರ್ ಜಗಳ ಬಿಡಿಸಿ, ರಕ್ತದ ಮಡುವಿನಲ್ಲಿದ್ದ ಅತ್ತೆಯನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಸಂಬಂಧ ಆರೋಪಿ ಮಧು ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
