ಮೂಡಿಗೆರೆ: ಟಿಯುಸಿಐ ಮತ್ತು ವಸತಿಗಾಗಿ ಹೋರಾಟ ವೇದಿಕೆಯಿಂದ ತಾಲೂಕಿನ ಮಣ್ಣಿಕೆರೆ ಗ್ರಾಮದಲ್ಲಿ 12 ದಿನದಿಂದ ನಡೆಯುತ್ತಿದ್ದ ಧರಣಿಯನ್ನು ಸೋಮವಾರ ಹಿಂಪಡೆಯುವ ಮೂಲಕ ನಿವೇಶನ ರಹಿತರು ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ಕಳೆದ 12 ದಿನದಿಂದ ಮಣ್ಣಿಕೆರೆಯಲ್ಲಿ ವಸತಿರಹಿತರು ತಮ್ಮ ಹಕ್ಕಿಗಾಗಿ ಗುಡಿಸಲು ನಿರ್ಮಿಸಿ ಧರಣಿ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಆಡಳಿತ 1 ತಿಂಗಳಲ್ಲಿ ನಿವೇಶನ ಮಂಜೂರು ಮಾಡುವ ಜತೆಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ವಹಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಕೆ.ಭರತ್ ಮಾತನಾಡಿ, ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ನಿವೇಶನ ರಹಿತರಿಗೆ ನಿವೇಶನ ನೀಡುವ ಕಾರ್ಯ ಮಾಡಬೇಕು. ಅಲ್ಲಿಗೆ ಒಂದು ತಿಂಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು. ಇಲ್ಲವಾದರೆ ಧರಣಿ ಇನ್ನಷ್ಟು ತೀವ್ರವಾಗಿ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.
ಇದಕ್ಕೂ ಮನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲುಕು ಕಚೇರಿ ವರೆಗೆ ನಿವೇಶನ ರಹಿತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಟಿಯುಸಿಐ ಜಿಲ್ಲಾ ಸಮಿತಿ ಸದಸ್ಯ ಸುರೇಶ್, ಯಶೊಧ, ಜಾನಕಿ, ಹರೀಶ್ ನಲ್ಕೆ, ಸವಿತಾ, ಭಾಗ್ಯ, ಶೇಖರ್, ಜಯಕುಮಾರ್, ಹರೀಶ್ ಕೆಲ್ಲೂರು ಮತ್ತಿತರರಿದ್ದರು.
