ಎನ್.ಆರ್. ಪುರ: ಮೌಡ್ಯದ ಪರಾಕಾಷ್ಠೆ ಎಂಬಂತಹ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ಉನ್ನತ ಅರಣ್ಯಾಧಿಕಾರಿಯನ್ನೇ ಗುರಿಯಾಗಿಸಿ ವಾಮಾಚಾರ ನಡೆಸಿರುವುದು ಸ್ಥಳೀಯವಾಗಿ ತೀವ್ರ ಆತಂಕ ಹಾಗೂ ಕುತೂಹಲ ಮೂಡಿಸಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮೋಹನ್ ಅವರ ಸರ್ಕಾರಿ ನಿವಾಸದ ಗೇಟ್ ಬಳಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಕೇವಲ ಅಧಿಕಾರಿಯನ್ನಷ್ಟೇ ಅಲ್ಲದೆ, ಅವರ ಜೀಪ್ ಚಾಲಕನನ್ನೂ ಗುರಿಯಾಗಿಸಿ ಈ ಮಾಟ-ಮಂತ್ರದ ಪ್ರಯೋಗ ಮಾಡಲಾಗಿದೆ.
ಮಣ್ಣಿನ ಮಡಕೆಯೊಂದರಲ್ಲಿ ಎಸಿಎಫ್ ಮೋಹನ್ ಮತ್ತು ಅವರ ಚಾಲಕನ ಭಾವಚಿತ್ರಗಳನ್ನು ಇಟ್ಟು, ಅದಕ್ಕೆ ಅರಿಶಿನ-ಕುಂಕುಮ ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ಹಾಕಿ, ಮನೆಯ ಪ್ರವೇಶ ದ್ವಾರದ ಬಳಿಯೇ ಮಡಕೆಯನ್ನು ಒಡೆದು ಹಾಕುವ ಮೂಲಕ ಭಯದ ವಾತಾವರಣ ನಿರ್ಮಿಸಲಾಗಿದೆ.
ಬೆಳಿಗ್ಗೆ ಮನೆಯಿಂದ ಹೊರಬಂದ ಅಧಿಕಾರಿ ಹಾಗೂ ಸಿಬ್ಬಂದಿಗೆ ಈ ದೃಶ್ಯ ಕಂಡುಬಂದಿದ್ದು, ತಕ್ಷಣವೇ ಆತಂಕಕ್ಕೊಳಗಾಗಿದ್ದಾರೆ. ಈ ಘಟನೆಯ ಹಿಂದೆ ಇಲಾಖೆಯೊಳಗಿನ ದ್ವೇಷವಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದ್ದು, ಸ್ವತಃ ಕಚೇರಿಯ ಸಿಬ್ಬಂದಿಯ ಮೇಲೆಯೇ ಎಸಿಎಫ್ ಮೋಹನ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕರ್ತವ್ಯದ ವಿಚಾರದಲ್ಲಿ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ವಾಮಾಚಾರದ ಹಾದಿ ಹಿಡಿದಿರಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.
