ಮೂಡಿಗೆರೆ: ತಾಲೂಕಿನ ಸಣ್ಣ ರೈತರು ವಿವಿಧ ಕಾರಣಗಳಿಂದ ಸಾಲ ಮರುಪಾವತಿಸಲು ಸಾಧ್ಯವಾಗದೆ ಎನ್ಪಿಎ (ನಿಷ್ಕ್ರಿಯ ಸಾಲ) ಪಟ್ಟಿಗೆ ಸೇರಿರುವ ಸಾಲಗಾರರಿಗೆ ವಿಶೇಷ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ರೈತ ಹಿತರಕ್ಷಣಾ ವೇದಿಕೆ ವತಿಯಿಂದ ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ದೇಶನದಂತೆ ಬ್ಯಾಂಕುಗಳು ಜಾರಿಗೊಳಿಸಿರುವ ಒನ್ಟೈಮ್ ಸೆಟಲ್ಮೆಂಟ್ (ಒಟಿಎಸ್) ಯೋಜನೆಯನ್ನು ಆರ್ಥಿಕ ಸಂಕಷ್ಟದಲ್ಲಿರುವ ರೈತರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲವಾಗುವಂತೆ ಅನುಷ್ಠಾನಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅತಿವೃಷ್ಟಿ, ಅನಾವೃಷ್ಟಿ, ಬೆಳೆ ನಷ್ಟ, ಬೆಲೆ ಕುಸಿತ, ಕೋವಿಡ್ ನಂತರದ ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಕಾರಣಗಳಿಂದ ಅನೇಕರು ಸಾಲ ಮರುಪಾವತಿಸಲು ಸಾಧ್ಯವಾಗದೆ ಬ್ಯಾಂಕುಗಳ ಕಾನೂನು ಕ್ರಮ ಹಾಗೂ ಜಪ್ತಿ ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹವರಿಗೆ ಬಡ್ಡಿ ಹಾಗೂ ದಂಡ ಬಡ್ಡಿಯಲ್ಲಿ ಸೂಕ್ತ ರಿಯಾಯಿತಿ ನೀಡಿ ಸಾಲ ಇತ್ಯರ್ಥಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.
ಬ್ಯಾಂಕ್ ಆಫ್ ಬರೋಡಾ ವತಿಯಿಂದ ನಡೆಯುತ್ತಿರುವ ಮೆಗಾ ಮಾನ್ಸೂನ್ ರಿಕವರಿ ಮೇಳ ಮಾದರಿಯಲ್ಲೇ ಕೆನರಾ ಬ್ಯಾಂಕ್ ಕೂಡ ವಿಶೇಷ ಸಾಲ ಮರುಪಾವತಿ ಶಿಬಿರಗಳನ್ನು ಆಯೋಜಿಸಿ, ಎನ್ಪಿಎ ಸಾಲಗಾರರಿಗೆ ಒಂದೇ ಬಾರಿಯ ಇತ್ಯರ್ಥ (ಒಟಿಎಸ್) ಸೌಲಭ್ಯವನ್ನು ಸುಲಭವಾಗಿ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ರೈತ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ದ್ವಾರಕನಾಥ್ ಮನಮೋಹನ ಸೇರಿದಂತೆ ಅನೇಕ ರೈತರು ಪ್ರಾದೇಶಿಕ ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ಚಿಕ್ಕಮಗಳೂರು ಹಾಗೂ ಪ್ರಧಾನ ವ್ಯವಸ್ಥಾಪಕರು, ಕೆನರಾ ಬ್ಯಾಂಕ್ ವೃತ್ತ ಕಚೇರಿ, ಬೆಂಗಳೂರು ಅವರಿಗೆ ಮನವಿ ಸಲ್ಲಿಸಿದ್ದಾರೆ.
