ಚಿಕ್ಕಮಗಳೂರು: ಮನೆ ಮುಂದೆ ನೀರು ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕಪಕ್ಕದ ಮನೆಯವರು ನಡು ರಸ್ತೆಯಲ್ಲೇ ಮಚ್ಚು ಹಿಡಿದು ಭೀಕರವಾಗಿ ಜಗಳವಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ.
ವಿಶೇಷವೆಂದರೆ, ಗಲಾಟೆ ಮಾಡಿಕೊಂಡ ಇಬ್ಬರ ಹೆಸರೂ ಸತೀಶ್ ಎಂಬುದಾಗಿದೆ. ಮನೆ ಮುಂದೆ ನೀರು ಹರಿಯುವ ಸಣ್ಣ ವಿಷಯಕ್ಕೆ ಶುರುವಾದ ತಕರಾರು ವಿಕೋಪಕ್ಕೆ ತಿರುಗಿದ್ದು, ಇಬ್ಬರೂ ಮಚ್ಚು ಹಿಡಿದು ಬೀದಿಗೆ ಬಿದ್ದಿದ್ದಾರೆ.
ಗಲಾಟೆಯ ತೀವ್ರತೆ ಎಷ್ಟಿತ್ತೆಂದರೆ, ಒಬ್ಬ ಸತೀಶ್ ಮಚ್ಚನ್ನು ಕೈಯಲ್ಲಿ ಅತ್ಯಂತ ಗಟ್ಟಿಯಾಗಿ ಹಿಡಿದಿದ್ದರಿಂದ ಆತನ ಕೈಯಿಂದ ರಕ್ತ ಹರಿದಿದೆ. ಈ ವೇಳೆ ಸ್ಥಳೀಯರು ಮಧ್ಯಪ್ರವೇಶಿಸಿ, ಹರಸಾಹಸಪಟ್ಟು ಆತನ ಕೈಯಲ್ಲಿದ್ದ ಮಚ್ಚನ್ನು ಕಸಿದುಕೊಂಡಿದ್ದಾರೆ. ಆದರೆ ಮಚ್ಚು ಕಿತ್ತುಕೊಂಡ ತಕ್ಷಣವೇ ಮತ್ತೊಬ್ಬ ಸತೀಶ್ ಇಟ್ಟಿಗೆಯನ್ನು ಹಿಡಿದು ಹಲ್ಲೆ ಮಾಡಲು ಮುಂದಾಗಿದ್ದಾನೆ.
ಸದ್ಯ ಈ ಜಗಳದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
