ಚಿಕ್ಕಮಗಳೂರು:ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಎಂದು ವಿವಾದಾತ್ಮಕ ಹೇಳಿಕೆ ಆರೋಪ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸರು ನೀಡಿರುವ ನೋಟಿಸ್ಗೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಲಿಖಿತ ಉತ್ತರ ಸಲ್ಲಿಸಿದ್ದು, ವಿವರಣೆ ನೀಡಲು ಏಳು ದಿನಗಳ ಕಾಲಾವಕಾಶ ಕೋರಿದ್ದಲ್ಲದೆ, ಪೊಲೀಸರಿಗೆ ಪ್ರತಿದೂರು ಸಲ್ಲಿಸಿದ್ದಾರೆ.
ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ನೋಟಿಸ್ ನೀಡಿದ ಬಳಿಕ ಉತ್ತರಿಸಲು ಏಳು ದಿನಗಳ ಕಾಲಾವಕಾಶ ನೀಡುವುದು ಕಡ್ಡಾಯವಾಗಿದೆ. ತಮಗೆ ನೀಡಿರುವ ಅಲ್ಪಾವಧಿಯ ಸಮಯವು ರಾಜಕೀಯ ಪ್ರೇರಿತವಾಗಿದೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ.
ತಾವು ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದು, ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಬೇಕಿರುವ ಹಿನ್ನೆಲೆಯಲ್ಲಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಬರ ಪರಿಸ್ಥಿತಿ ಪರಿಶೀಲನೆಗಾಗಿ ತೆರಳಬೇಕಿದೆ.. ಅಲ್ಲದೆ ಜುಲೈ 29 ಮತ್ತು 30ರಂದು ಪಕ್ಷದ ತುರ್ತು ಕಾರ್ಯಕ್ರಮಗಳಲ್ಲೂ ಭಾಗವಹಿಸುವುದಿದೆ. ಹೀಗಾಗಿ, ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿದ ಬಳಿಕ ಸಮಗ್ರ ವಿವರಣೆ ಸಲ್ಲಿಸುತ್ತೇನೆ. ಉತ್ತರ ನೀಡಲು ಏಳು ದಿನಗಳ ಗಡುವು ನೀಡಬೇಕು ಎಂದು ಸಿ.ಟಿ.ರವಿ ಮನವಿ ಮಾಡಿದ್ದಾರೆ.
