ಹಾಸನ: ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಕಳ್ಳರು, ಮನೆಗೆ ನುಗ್ಗಿ ಸುಮಾರು 69.56 ಲಕ್ಷ ಮೌಲ್ಯದ 441.5 ಗ್ರಾಂ ಚಿನ್ನಾಭರಣ ಹಾಗೂ 13.40 ಲಕ್ಷ ನಗದು ಕದ್ದು ಪರಾರಿಯಾಗಿರುವ ಘಟನೆ ಹಾಸನ ತಾಲೂಕಿನ ದೊಡ್ಡ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ
ದೊಡ್ಡ ಹೊನ್ನೇನಹಳ್ಳಿ ಗ್ರಾಮದ ಕೇಶವೇಗೌಡ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಘಟನೆ ನಡೆದ ವೇಳೆ ಕೇಶವೇಗೌಡ, ಅವರ ಪತ್ನಿ ಜಯಲಕ್ಷ್ಮೀ ಹಾಗೂ ಪುತ್ರ ವೇಣುಗೋಪಾಲ್ ಜಮೀನಿನ ಕೆಲಸಕ್ಕೆ ತೆರಳಿದ್ದರು. ಸೊಸೆ ಅಮೃತಾ ಮಗನನ್ನು ಶಾಲೆಗೆ ಬಿಟ್ಟು ಬರಲು ತೆರಳಿದ್ದರು. ಈ ವೇಳೆ ಅವರು ಮನೆಗೆ ಒಳಗಿನಿಂದ ಬೋಲ್ಟ್ ಹಾಕಿ ಹೋಗಿದ್ದರು.
ಈ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ಕಳ್ಳರು ಬೀರುವಿನಲ್ಲಿದ್ದ 441.5 ಗ್ರಾಂ ಚಿನ್ನಾಭರಣ ಹಾಗೂ 13.40 ಲಕ್ಷ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಬಳಿಕ ಮನೆಗೆ ವಾಪಸಾದ ಅಮೃತಾ ಕಳ್ಳತನವಾಗಿರುವುದನ್ನು ಗಮನಿಸಿ ಕುಟುಂಬದವರಿಗೆ ಮಾಹಿತಿ ನೀಡಿದ್ದರು.
ಕುಟುಂಬದ ಸದಸ್ಯರಷ್ಟೇ ಅಲ್ಲದೆ ಇಬ್ಬರು ಹೆಣ್ಣುಮಕ್ಕಳ ಚಿನ್ನಾಭರಣಗಳನ್ನೂ ಕೇಶವೇಗೌಡ ಮನೆಯಲ್ಲೇ ಸುರಕ್ಷಿತವಾಗಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಕಳ್ಳರು ಅವುಗಳನ್ನೂ ದೋಚಿಕೊಂಡು ಹೋಗಿದ್ದಾರೆ
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
