ಹಾಸನ: ನಗರದಿಂದ ಮೈಸೂರಿಗೆ ತೆರಳುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ನಡೆದಿದೆ
ಮೈಸೂರಿನ ವಿಜಯನಗರ ನಿವಾಸಿ ಸುಭಾಷಿಣಿ ಅವರು ಮೇ 6ರಂದು ಹಾಸನ ಬಸ್ ನಿಲ್ದಾಣದಿಂದ ಮಧ್ಯಾಹ್ನ ಮೈಸೂರಿಗೆ ತೆರಳುವ ಬಸ್ ಹತ್ತಿದ್ದರು. ಪ್ರಯಾಣದ ವೇಳೆ ಹೊಳೆನರಸೀಪುರದವರೆಗೆ ನಿಂತುಕೊಂಡೇ ಪ್ರಯಾಣ ಮಾಡಿದ್ದ ಅವರು, ಬಳಿಕ ಸೀಟು ಸಿಕ್ಕ ನಂತರ ಕುಳಿತುಕೊಂಡಿದ್ದರು.
ಈ ವೇಳೆ ನೀರು ಕುಡಿಯಲು ವ್ಯಾನಿಟಿ ಬ್ಯಾಗ್ ತೆಗೆದು ಪರಿಶೀಲಿಸಿದಾಗ, ಅದರಲ್ಲಿದ್ದ ಸುಮಾರು 60 ಗ್ರಾಂ ಚಿನ್ನಾಭರಣ, ₹8 ಸಾವಿರ ಮೌಲ್ಯದ ವಾಚ್ ಹಾಗೂ ₹20 ಸಾವಿರ ನಗದು ಕಳುವಾಗಿರುವುದು ಗೊತ್ತಾಗಿದೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹6 ಲಕ್ಷ ಎಂದು ಅಂದಾಜಿಸಲಾಗಿದೆ.
ಪ್ರಕರಣ ಸಂಬಂಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
