ಕೊಪ್ಪ: ಬಿಜೆಪಿ. ನೇತೃತ್ವದ ಕೇಂದ್ರ ಸರ್ಕಾರದಿಂದ ಕೊಪ್ಪ, ಎನ್. ಆರ್. ಪುರ ತಾಲೂಕಿನ ಜನತೆಗೆ ಘೋರ ಅನ್ಯಾಯವಾಗಿದೆ. ಉಡುಪಿ,ಚಿಕ್ಕಮಗಳೂರು ಲೋಕಸಭಾ ಸಂಸದರಾದ ಶ್ರೀನಿವಾಸ್ ಪೂಜಾರಿ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಓಣಿತೋಟ ರತ್ನಾಕರ್ ಆಗ್ರಹಿಸಿದ್ದಾರೆ.
ಶಿವಮೊಗ್ಗದಿಂದ ಎನ್. ಆರ್. ಪುರ-ಕೊಪ್ಪ-ಶೃಂಗೇರಿ-ಮಂಗಳೂರು ತಲುಪುವ ರೈಲ್ವೆ ಲೈನ್ ಗೆ ಈ ಹಿಂದೆ ಸರ್ವೇ ಆಗಿದ್ದು, ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ. ವೈ. ರಾಘವೇಂದ್ರ ರವರ ಪಿತೂರಿ ಮತ್ತು ಸ್ವಾರ್ಥದಿಂದ ಶಿವಮೊಗ್ಗ ರೈಲ್ವೆ ಲೈನ್ ಅನ್ನು ಶಿವಮೊಗ್ಗ-ಮುತ್ತಿನಕೊಪ್ಪ-ಮುಡುಬಾ-ತೀರ್ಥಹಳ್ಳಿ-ಶೃಂಗೇರಿ-ಮಂಗಳೂರು ಹೀಗೆ ರೈಲ್ವೆ ಲೈನ್ ಬದಲಾಯಿಸಿದ್ದು, ಇದರ ಬಗ್ಗೆ ಚಕಾರ ಎತ್ತದಿರುವ ಬಿಜೆಪಿಯ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರು ತಾವು ಪ್ರತಿನಿಧಿಸುವ ಎನ್.ಆರ್. ಪುರ ಮತ್ತು ಕೊಪ್ಪ ತಾಲ್ಲೂಕಿನ ಜನತೆಗೆ ಘೋರ ಅನ್ಯಾಯ ಎಸಗಿದ್ದಾರೆ. ಆದ್ದರಿಂದ ತಮ್ಮ ಕ್ಷೇತ್ರದ ಜನತೆಯ ಹಿತ ಕಾಪಾಡಲು ಅಸಮರ್ಥರಾದ ಶ್ರೀನಿವಾಸ್ ಪೂಜಾರಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು
ಅಲ್ಲದೆ ಕೊಪ್ಪ, ಎನ್. ಆರ್. ಪುರ ತಾಲ್ಲೂಕುಗಳ ಬಿ. ಜೆ. ಪಿ. ನಾಯಕರುಗಳು ಇದರ ವಿರುದ್ಧ ಮುಂದಿನ ದಿನಗಳಲ್ಲಿ ನಾವು ನಡೆಸುವ ಹೋರಾಟದಲ್ಲಿ ಭಾಗವಹಿಸಿ ಶೃಂಗೇರಿ ಕ್ಷೇತ್ರದ ಜನತೆಗೆ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸುತ್ತೇನೆ. ಈಗಾಗಲೇ ಶಿವಮೊಗ್ಗ, ಮುತ್ತಿನಕೊಪ್ಪ, ಮುಡುಬಾ, ತೀರ್ಥಹಳ್ಳಿ, ಶೃಂಗೇರಿ ಹೀಗೆ ಸುತ್ತಿಕೊಂಡು ಬರುವ ರೈಲ್ವೆ ಲೈನ್ ಗೆ ರೂ. 3800 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆಯುವ ಹಂತದಲ್ಲಿದ್ದು ಈ ಕೂಡಲೇ ಶೃಂಗೇರಿ ಕ್ಷೇತ್ರದ ಜನರು ಎಚ್ಛೆತುಕೊಂಡು ಇದರ ವಿರುದ್ಧ ಪ್ರತಿಭಟಿಸಬೇಕು. ಶಿವಮೊಗ್ಗ-ಎನ್. ಆರ್. ಪುರ.-ಕೊಪ್ಪ-ಶೃಂಗೇರಿ ಮಾರ್ಗವಾಗಿ ಮಂಗಳೂರು ತಲಪುವ ರೈಲ್ವೆ ಲೈನ್ ಅನ್ನೇ ಮುಂದುವರಿಸಬೇಕೆಂದು ಶೃಂಗೇರಿ ಕ್ಷೇತ್ರದ ಜನತೆಯ ಪರವಾಗಿ ಒತ್ತಾಯಿಸುತ್ತೇವೆ ಎಂದು ಹೇಳಿದರು
