ಕಳಸ: ತೂಗುಸೇತುವೆ ಶಿಥಿಲವಾಗಿದ್ದು, ಇಲ್ಲಿನ ಅಂಬಾತೀರ್ಥ ರಸ್ತೆಯ ಮೂಲಕ ಹಾದು ಹೋಗುವ ಪ್ರವಾಸಿಗರನ್ನು ಸ್ಥಳೀಯ ನಿವಾಸಿಗಳು ತಡೆದು ನಿಲ್ಲಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಲ್ಲುಗೋಡು ಗ್ರಾಮದಲ್ಲಿ ನಡೆದಿದೆ.
ಹೌದು .. 15 ವರ್ಷದಿಂದ ಈ ಊರಿನ ಸೇತುವೆಗೆ ನಿರ್ವಹಣೆ ಮಾಡಿಲ್ಲ. ಕಳಸ, ಹೊರನಾಡು, ಕುದುರೆಮುಖಕ್ಕೆ ಭೇಟಿ ನೀಡುವ ಪ್ರವಾಸಿಗರು ಕಲ್ಲುಗೋಡಿನ ತೂಗುಸೇತುವೆಗೆ ಭೇಟಿ ನೀಡುತ್ತಾರೆ. ಏಕಕಾಲಕ್ಕೆ 50ಕ್ಕೂ ಹೆಚ್ಚು ಪ್ರವಾಸಿಗರು ಸೇತುವೆಯ ಮೇಲೆ ಹಾದು ಹೋಗುವುದರಿಂದ ತೂಗುಸೇತುವೆಗೆ ಹಾನಿಯಾಗುತ್ತದೆ.
ನಿರ್ಮಾಣಗೊಂಡು ಒಂದು ದಶಕ ಕಳೆದಿರುವುದರಿಂದ ದುರ್ಬಲಗೊಂಡಿದೆ. ಕಬ್ಬಿಣಕ್ಕೆ ತುಕ್ಕು ಹಿಡಿದಿದೆ, ಬಣ್ಣ ಬಳಿಯಲೂ ಯಾರೂ ಮುಂದಾಗಿಲ್ಲ. ಸೇತುವೆ ದುರಸ್ತಿಗೆ ಅನುದಾನ ಯಾವ ಇಲಾಖೆಯಿಂದ ಕೊಡಮಾಡಬೇಕು ಎನ್ನುವುದರಲ್ಲಿಯೇ ಗೊಂದಲವಿದೆ ಎನ್ನುತ್ತಾರೆ ಗ್ರಾಮಸ್ಥರು.
ಇನ್ನು, ಗ್ರಾಮಕ್ಕೆ ಸದ್ಯಕ್ಕೆ ಇರುವ ಏಕೈಕ ಸಂಪರ್ಕ ಮಾರ್ಗವಾಗಿರುವ ಈ ಸೇತುವೆ ಹಾನಿಯಾದರೆ ಸ್ಥಳೀಯರಿಗೆ ಓಡಾಡಲು ಬೇರೆ ಪರ್ಯಾಯ ಮಾರ್ಗವೇ ಇಲ್ಲ. ಆದ್ದರಿಂದ, ತೂಗುಸೇತುವೆ ದುರಸ್ತಿಗೊಳ್ಳುವ ತನಕವೂ ಪ್ರವಾಸಿಗರಿಗೆ ಈ ಮಾರ್ಗದ ಮೂಲಕ ಸಂಚಾರಕ್ಕೆ ತಡೆಯೊಡ್ಡಲಾಗಿದೆ.
