ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ದರ್ಗಾದ ಐತಿಹಾಸಿಕ ಸ್ವರೂಪ, ಧಾರ್ಮಿಕ ಆಚರಣೆಗಳು ಹಾಗೂ ಭಕ್ತರ ಹಕ್ಕುಗಳ ಕುರಿತು ಸಯ್ಯದ್ ಬುಡನ್ ಶಾ ಖಾದ್ರಿ ವಂಶಸ್ಥರು ಸ್ಪಷ್ಟನೆಯನ್ನು ನೀಡಿದ್ದಾರೆ. ಇತ್ತೀಚೆಗೆ ದರ್ಗಾದ ಇತಿಹಾಸ ಹಾಗೂ ಸಂಪ್ರದಾಯಗಳ ಬಗ್ಗೆ ಕೆಲವು ವ್ಯಕ್ತಿಗಳು ಹರಡುತ್ತಿರುವ ತಪ್ಪು ಕಲ್ಪನೆಗಳು ಮತ್ತು ಆಕ್ಷೇಪಾರ್ಹ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಪ್ರಕಟಣೆಯನ್ನು ಹೊರಡಿಸಲಾಗಿದೆ ಎಂದು ಸಯ್ಯದ್ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದ್ದಾರೆ.
ದರ್ಗಾದ ಇತಿಹಾಸವು ಕೇವಲ ಊಹಾಪೋಹಗಳ ಆಧಾರದ ಮೇಲೆ ನಿಂತಿಲ್ಲ, ಬದಲಿಗೆ ಹಳೆಯ ಅಧಿಕೃತ ದಾಖಲೆಗಳು, ಕಂದಾಯ ದಾಖಲೆಗಳು ಮತ್ತು ಸರ್ಕಾರದ ಆದೇಶಗಳ ಭದ್ರ ಬುನಾದಿಯನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೈಸೂರು ಸರ್ಕಾರದ 1890-91ರ ಅಪೀಲು ಸಂಖ್ಯೆ 1059 ಮತ್ತು ಇನಾಂ ಸೆಟ್ಲಮೆಂಟ್ ಪ್ರಕ್ರಿಯೆಗಳ ಪ್ರಕಾರ, ಈ ಪ್ರದೇಶವನ್ನು “ದತ್ತಾತ್ರೇಯ ಪೀಠ ದರ್ಗಾ” ಎಂಬ ಹೆಸರಿನ ಕಂದಾಯ ಗ್ರಾಮವಾಗಿ ಗುರುತಿಸಲಾಗಿತ್ತು.
ಅಲ್ಲದೆ, ಮೈಸೂರು ಸರ್ಕಾರದ ಮುಜರಾಯಿ ಕೈಪಿಡಿಯ (Muzrai Manual) 11ನೇ ಅಧ್ಯಾಯದಲ್ಲಿಯೂ ಈ ಕ್ಷೇತ್ರವನ್ನು ಮೊಹಮ್ಮದನ್ ಧಾರ್ಮಿಕ ಸಂಸ್ಥೆ (Mohammadan Institution) ಎಂದು ಉಲ್ಲೇಖಿಸಿರುವುದನ್ನು ಅವರು ನೆನಪಿಸಿದ್ದಾರೆ. ದರ್ಗಾದಲ್ಲಿರುವ ಪವಿತ್ರ ಸಮಾಧಿಗಳಿಗೆ ಹಸಿರು ಚಾದರ್ ಅರ್ಪಿಸುವುದು ಮತ್ತು ಧಾರ್ಮಿಕ ಆಚರಣೆಗಳನ್ನು ನಡೆಸುವುದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸೂಫಿ ಪರಂಪರೆಯ ಭಕ್ತಿಯ ಸಂಕೇತವೇ ಹೊರತು ಯಾವುದೇ ಹೊಸದಾಗಿ ಸೃಷ್ಟಿಸಿದ ಆಚರಣೆಯಲ್ಲ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಭಾರತಕ್ಕೆ ಕಾಫಿ ಬೀಜಗಳನ್ನು ಪರಿಚಯಿಸಿ ಕಾಫಿನಾಡಿನ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿರುವ ಬಾಬಾ ಬುಡನ್ ಅವರ ಪರಂಪರೆಯು ಭಕ್ತಿ, ಸತ್ಯ, ನ್ಯಾಯ ಮತ್ತು ಮಾನವೀಯತೆಯ ಮೌಲ್ಯಗಳನ್ನು ಒಳಗೊಂಡಿದೆ. ರಘು ಸಕಲೇಶಪುರ ಸೇರಿದಂತೆ ಕೆಲವರು ಹರಡುತ್ತಿರುವ ತಪ್ಪು ಮಾಹಿತಿಗಳು ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಜಿಲ್ಲಾಡಳಿತವು ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಯ್ಯದ್ ಫಕ್ರುದ್ದೀನ್ ಶಾ ಖಾದ್ರಿ ಆಗ್ರಹಿಸಿದ್ದಾರೆ.
