ಮೂಡಿಗೆರೆ : ಕಸಾಪ ಮಹಿಳಾ ಘಟಕದಿಂದ ಎಸ್.ಜಾನಕಿ ನುಡಿನಮನ ಮತ್ತು ಗಾನನಮನ ಕಾರ್ಯಕ್ರಮ ಪಟ್ಟಣದ ಜೆಸಿ ಹಾಲ್ ನಲ್ಲಿ ನಡೆಯಿತು
ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಮಂಚೇಗೌಡ ಅವರು ಮಾತನಾಡಿ ಎಸ್.ಜಾನಕಿಯವರ ಹಾಡುಗಳು ಎಂದೆಂದಿಗೂ ಅಜರಾಮರವಾಗಿದ್ದು, ಅವರೊಬ್ಬರು ಮೇರು ಗಾಯಕಿಯಾಗಿ ಭಾರತದ ಸಂಗೀತ ಲೋಕವನ್ನು ಬೆಳಗಿದರು ಎಂದು ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಕಸಾಪ ಮಹಿಳಾ ಘಟಕ ಮತ್ತು ಜಿಲ್ಲಾ ಮಹಿಳಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್. ಜಾನಕಿ ಸ್ಮರಣೆಯ ಗಾನಾಭಿಷೇಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್.ಜಾನಕಿಯವರ ಮಾತೃಭಾಷೆ ಬೇರೆಯಾದರೂ ಕನ್ನಡ ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿ ಅವರು ಮನೋಜ್ಞವಾಗಿ ಹಾಡಿದ್ದಾರೆ. ಅವರ ಸ್ವರದಲ್ಲಿ ಒಂದು ಮಾಂತ್ರಿಕ ಶಕ್ತಿ ಇತ್ತು. ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡದೇ ಅವರು ತಮ್ಮ ಸ್ವಪ್ರತಿಭೆಯಿಂದ ಸಂಗೀತ ಲೋಕದಲ್ಲಿ ಅಚ್ಚಳಿಯದ ಹೆಸರು ಮಾಡಿದ್ದರು. ಅವರು ನಮ್ಮನ್ನು ಅಗಲಿದ್ದರೂ ಅವರ ಹಾಡುಗಳ ಮೂಲಕ ಎಂದೆಂದಿಗೂ ಸಂಗೀತ ಪ್ರಿಯರ ಮನದಲ್ಲಿ ಹಚ್ಚ ಹಸಿರಾಗಿ ಇರುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರೇಖಾ ರವಿರಾಜ್ ಅವರು ಮಾತನಾಡಿ ; ನಾವೆಲ್ಲಾ ಬಾಲ್ಯದಿಂದಲೂ ಎಸ್.ಜಾನಕಿಯವರ ಹಾಡುಗಳನ್ನು ಕೇಳುತ್ತಾ ಬಂದಿದ್ದೇವೆ. ಎಸ್.ಜಾನಕಿಯವರು ಮಕ್ಕಳಿಂದ ಹಿಡಿದು ಹಿರಿಯರ ಸ್ವರಗಳನ್ನು ತಮ್ಮ ಹಾಡಿನಲ್ಲಿ ಸುಲಲಿತವಾಗಿ ಅಳವಡಿಸಿಕೊಂಡು ಕೇಳುಗರನ್ನು ಮಂತ್ರಮುಗ್ದಗೊಳಿಸುತ್ತಿದ್ದರು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವವರಿಗೆ ಅವರು ಒಂದು ಮಾದರಿ ವ್ಯಕ್ತಿತ್ವದವರಾಗಿದ್ದರು. ಅವರು ಸ್ವಭಾವದಲ್ಲಿಯೂ ಸರಳತೆಯನ್ನು ಅಳವಡಿಸಿಕೊಂಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಜೇಸಿಐ ಅಧ್ಯಕ್ಷ ಸುನಿಲ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಕಮಲಮ್ಮ, ಲೇಖಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆ ಪ್ರೇಮಾ ಪುಣ್ಯಮೂರ್ತಿ, ಕಸಾಪ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಾಯಕರಾದ ಬಕ್ಕಿ ಮಂಜುನಾಥ್, ಸುಚಿತ್ರ ಪ್ರಸನ್ನ, ಅಶ್ವಿನಿ ಸಂತೋಷ್, ನವ್ಯ ಅಜಿತ್, ಸ್ಪೂರ್ತಿ ನಯನಾ, ಯಶೋಧ, ವಿಜಯಲಕ್ಷ್ಮೀ ಅವರ ತಂಡದವರು ಎಸ್. ಜಾನಕಿಯವರ ಗೀತೆಗಳನ್ನು ಹಾಡಿದರು.
