Tuesday, August 11, 2026
Homeಹೊರರಾಜ್ಯ“ಭಾರತ ಎಲ್ಲರಿಗೂ ಸೇರಿದ್ದು, ಭೇದಭಾವ ಮರೆತು ಒಂದಾಗಿ": ದೆಹ್ರಾಡೂನ್ ವಿದ್ಯಾರ್ಥಿ ಹತ್ಯೆ ಬೆನ್ನಲ್ಲೇ ಏಕತೆಯ ಕರೆ...

“ಭಾರತ ಎಲ್ಲರಿಗೂ ಸೇರಿದ್ದು, ಭೇದಭಾವ ಮರೆತು ಒಂದಾಗಿ”: ದೆಹ್ರಾಡೂನ್ ವಿದ್ಯಾರ್ಥಿ ಹತ್ಯೆ ಬೆನ್ನಲ್ಲೇ ಏಕತೆಯ ಕರೆ ನೀಡಿದ ಮೋಹನ್ ಭಾಗವತ್

Telegram Group
Join Now

ಛತ್ತೀಸ್‌ಗಢ : ದೇಶದ ವಿವಿಧೆಡೆ ವಲಸೆಗಾರರ ಮೇಲೆ ದಾಳಿಗಳು ವರದಿಯಾಗುತ್ತಿರುವ ಮತ್ತು ದೆಹ್ರಾಡೂನ್‌ನಲ್ಲಿ ತ್ರಿಪುರ ಮೂಲದ ವಿದ್ಯಾರ್ಥಿಯೊಬ್ಬ ದೌರ್ಜನ್ಯಕ್ಕೆ ಬಲಿಯಾದ ಆಘಾತಕಾರಿ ಘಟನೆಯ ಬೆನ್ನಲ್ಲೇ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಾಮಾಜಿಕ ಸಾಮರಸ್ಯದ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. 

ಛತ್ತೀಸ್‌ಗಢದ ಸೋನ್‌ಪೈರಿ ಗ್ರಾಮದಲ್ಲಿ ಮಾತನಾಡಿದ ಅವರು, ಜಾತಿ, ಸಂಪತ್ತು, ಭಾಷೆ ಅಥವಾ ಪ್ರಾಂತೀಯ ಭೇದಗಳನ್ನು ಬದಿಗಿಟ್ಟು ಪ್ರತಿಯೊಬ್ಬ ಭಾರತೀಯನನ್ನು ‘ನಮ್ಮವನು’ ಎಂದು ಸ್ವೀಕರಿಸಿದಾಗ ಮಾತ್ರ ದೇಶದ ನಿಜವಾದ ಏಕತೆ ಸಾಧ್ಯ ಎಂದು ಪ್ರತಿಪಾದಿಸಿದರು.

ಸಾಮರಸ್ಯ ಮತ್ತು ಭೇದಭಾವ ಮುಕ್ತ ಸಮಾಜದ ಆವಶ್ಯಕತೆ

ಸಾಮರಸ್ಯದ ಮೊದಲ ಹೆಜ್ಜೆಯಾಗಿ ಭೇದಭಾವ ಮತ್ತು ವಿಭಜನೆಯ ಭಾವನೆಗಳನ್ನು ಮನಸ್ಸಿನಿಂದ ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದು ಭಾಗವತ್ ಒತ್ತಾಯಿಸಿದರು. “ಜಾತಿ, ಸಂಪತ್ತು, ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ಜನರನ್ನು ನೋಡಬೇಡಿ. ಎಲ್ಲರನ್ನೂ ನಿಮ್ಮವರೆಂದು ಭಾವಿಸಿ. ಇಡೀ ಭಾರತ ನನ್ನದು ಎಂದು ಭಾವಿಸಿದಾಗ ಮಾತ್ರ ನಿಜವಾದ ಸಾಮಾಜಿಕ ಸಾಮರಸ್ಯ ಸಾಧ್ಯವಾಗುತ್ತದೆ,” ಎಂದು ಅವರು ಕಿವಿಮಾತು ಹೇಳಿದರು. ಅಲ್ಲದೆ, ಸಾರ್ವಜನಿಕ ಸೌಲಭ್ಯಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಎಲ್ಲರಿಗೂ ಮುಕ್ತವಾಗಿ ತೆರೆದಿಡುವುದು ಏಕತೆಯ ದ್ಯೋತಕವೇ ಹೊರತು ಸಂಘರ್ಷಕ್ಕಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ದೆಹ್ರಾಡೂನ್ ಘಟನೆ ಮತ್ತು ಹಿನ್ನೆಲೆ

ತ್ರಿಪುರ ಮೂಲದ ಎಂಬಿಎ ವಿದ್ಯಾರ್ಥಿ ಅಂಜೆಲ್ ಚಕ್ಮಾ, ದೆಹ್ರಾಡೂನ್‌ನಲ್ಲಿ ನಡೆದ ಹಲ್ಲೆಯ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 26ರಂದು ಮೃತಪಟ್ಟಿದ್ದರು. ಕ್ಯಾಂಟೀನ್‌ನಲ್ಲಿ ನಡೆದ ಘರ್ಷಣೆಯಲ್ಲಿ ದಾಳಿಕೋರರು ಆತನನ್ನು “ಚೈನೀಸ್” ಎಂದು ಜನಾಂಗೀಯವಾಗಿ ನಿಂದಿಸಿ, ತೀಕ್ಷ್ಣ ಆಯುಧಗಳಿಂದ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ತಾವು ಭಾರತೀಯ ಎಂದು ಹೇಳಿಕೊಂಡರೂ ದಾಳಿ ಮುಂದುವರಿದಿತ್ತು ಎಂಬುದು ಅವರ ಕುಟುಂಬದ ಗಂಭೀರ ಆರೋಪವಾಗಿದೆ. ಈ ಘಟನೆಯು ದೇಶಾದ್ಯಂತ ಜನಾಂಗೀಯ ತಾರತಮ್ಯದ ವಿರುದ್ಧ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಬಗ್ಗೆ ಪ್ರಸ್ತಾಪಿಸಿದ ಭಾಗವತ್, ಸಮಸ್ಯೆಗಳ ಬಗ್ಗೆ ಕೇವಲ ಚರ್ಚೆ ಮಾಡುವುದಕ್ಕಿಂತ ಪರಿಹಾರಗಳ ಬಗ್ಗೆ ಯೋಚಿಸುವುದು ಮುಖ್ಯ ಎಂದರು. “ಹಿಂದೂ ಸಮಾಜವು ಸ್ಥಿರವಾಗಿದ್ದರೆ ಯಾವುದೇ ಸಂಕಷ್ಟ ನಮ್ಮನ್ನು ಮುಟ್ಟಲಾರದು. ಯಾವ ಹಿಂದೂ ಕೂಡ ತನ್ನೊಳಗೆ ತಾರತಮ್ಯ ಮಾಡಬಾರದು” ಎಂದು ಹೇಳಿದರು. ಧಾರ್ಮಿಕ ಮತಾಂತರದ ಕುರಿತು ಮಾತನಾಡುತ್ತಾ, ಸಮಾಜದಲ್ಲಿನ ವಿಶ್ವಾಸದ ಕೊರತೆಯೇ ಮತಾಂತರಕ್ಕೆ ಪ್ರಮುಖ ಕಾರಣ. ಜನಸಾಮಾನ್ಯರೊಂದಿಗೆ ಮರುಸಂಪರ್ಕ ಸಾಧಿಸುವ ಮೂಲಕ ಇಂತಹ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಅವರು ಸಲಹೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments