ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಈಗ ಭರ್ಜರಿ ತೆರೆ ಬಿದ್ದಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಗುರೂಜಿ ಅವರು ರಾಜ್ಯ ರಾಜಕೀಯದ ಭವಿಷ್ಯದ ಬಗ್ಗೆ ಅತ್ಯಂತ ಸ್ಪೋಟಕ ನುಡಿಗಳನ್ನು ಆಡಿದ್ದಾರೆ.
ಮಾಧ್ಯಮಗಳ ಜೊತೆ ಪ್ರತ್ಯೇಕವಾಗಿ ಮಾತನಾಡಿರುವ ಅವರು, “ಡಿಕೆ ಶಿವಕುಮಾರ್ ಸೋಮವಾರದ ಒಳಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಮುಂದಿನ 8 ವರ್ಷಗಳ ಕಾಲ ಅವರ ಅಧಿಕಾರವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಭವಿಷ್ಯ ನುಡಿದಿದ್ದಾರೆ.
ಡಿಕೆಶಿಗೆ ಸಿಎಂ ಪಟ್ಟ ಸಿಗುವುದು ತಡವಾಗುತ್ತಿದ್ದ ಹಿನ್ನೆಲೆಯಲ್ಲಿ ತಾವು ಶೃಂಗೇರಿಗೆ ತೆರಳಿದ್ದ ರಹಸ್ಯವನ್ನು ಗುರೂಜಿ ಬಿಚ್ಚಿಟ್ಟಿದ್ದಾರೆ.
”ಅವನಿಗೆ ಸಿಎಂ ಆಗೋದು ನ್ಯಾಯವಾಗಿ ಹೊಸ ವರ್ಷದ ಒಳಗೇ ಆಗಬೇಕಿತ್ತು. ಆದರೆ ನಿಧಾನವಾಗುತ್ತಿತ್ತು. ಅದಕ್ಕಾಗಿಯೇ ನಾನು ಅವನ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಹೋಗಿದ್ದೆ. ನಾನು ಶೃಂಗೇರಿಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ಖುದ್ದು ಡಿ.ಕೆ. ಶಿವಕುಮಾರ್ ನನಗೆ ಫೋನ್ ಕಾಲ್ ಮಾಡಿ ‘ಗುರೂಜಿ, ಕೆಲಸ ಆಗಿದೆ’ ಎಂದು ಸಿಹಿ ಸುದ್ದಿ ನೀಡಿದ. ಸೋಮವಾರದ ಒಳಗೆ ಆತ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾನೆ” ಎಂದು ಗುರೂಜಿ ಹರ್ಷ ವ್ಯಕ್ತಪಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರೊಂದಿಗಿನ ತಮ್ಮ 35 ವರ್ಷಗಳ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡ ಅವರು, “ಹಿಂದೆ ಮಾಜಿ ಸಿಎಂ ಬಂಗಾರಪ್ಪ ಅವರ ಸಂಪುಟದಲ್ಲಿ ಅತ್ಯಂತ ಸಣ್ಣ ವಯಸ್ಸಿಗೆ ಜೈಲು ಮಂತ್ರಿಯಾಗಿದ್ದಾಗಲೇ, ‘ನೀನು ಮುಂದೊಂದು ದಿನ ಈ ರಾಜ್ಯಕ್ಕೆ ಮುಖ್ಯಮಂತ್ರಿ ಆಗ್ತೀಯಾ’ ಎಂದು ಭವಿಷ್ಯ ಹೇಳಿದ್ದೆ. ಅವನು ನಮ್ಮ ಮನೆಯ ಮಗನಿದ್ದಂತೆ” ಎಂದಿದ್ದಾರೆ.
ಮುಂದಿನ ಆಡಳಿತದ ಬಗ್ಗೆ ಮಾತನಾಡಿದ ಗುರೂಜಿ, “ಡಿಕೆಶಿ ತುಂಬಾ ಬುದ್ಧಿವಂತ ಮತ್ತು ಜಾಣ. ಕೆಲವೊಮ್ಮೆ ಉದ್ವೇಗ ಇರುತ್ತದೆಯಾದರೂ ಆತನಿಗೆ ಸಹನೆ ಇದೆ, ಎಲ್ಲವನ್ನೂ ಸಂಭಾಳಿಸುತ್ತಾನೆ. ಹೆಗಲ ಮೇಲೆ ಕೈ ಹಾಕಿ ಯಾರನ್ನು ಬೇಕಾದರೂ ಮಾತನಾಡಿಸುವ ಗುಣ ಆತನಲ್ಲಿದೆ. ಆತ ಇವರ ಕಡೆಯವರು ಅವರ ಕಡೆಯವರು ಅಂತ ಯಾರನ್ನೂ ಬ್ರಾಂಡ್ ಮಾಡಲ್ಲ. ಯಾಕಂದ್ರೆ ಶಿವಕುಮಾರ್ ಅನ್ನೋದೇ ಒಂದು ಬ್ರಾಂಡ್!” ಎಂದು ಕೊಂಡಾಡಿದ್ದಾರೆ.
ಡಿಕೆಶಿ ಮುಖ್ಯಮಂತ್ರಿಯಾದ ಮೇಲೆ ಬೆಂಗಳೂರಿನ ಮೂಲಸೌಕರ್ಯ, ಕುಡಿಯುವ ನೀರು ಮತ್ತು ಟ್ರಾಫಿಕ್ ಸಮಸ್ಯೆಯನ್ನು ಆದ್ಯತೆಯ ಮೇಲೆ ಸರಿಪಡಿಸಲಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತರನ್ನು ಕೂಡ ಜೊತೆಯಲ್ಲೇ ಕರೆದುಕೊಂಡು ಹೋಗಿ ಒಂದು ಅತ್ಯುತ್ತಮ ಸರ್ಕಾರವನ್ನು ನೀಡಲಿದ್ದಾರೆ ಎಂದು ಗುರೂಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
