ಕೊಟ್ಟಿಗೆಹಾರ: ಕುಟುಂಬದಲ್ಲಿ ಪ್ರೀತಿ,ಏಕತೆ,ದೀನತೆಯಿಂದ ಬದುಕುವುದೇ ಯೇಸು ಕ್ರಿಸ್ತರ ಸಂದೇಶವಾಗಿದೆ’ಎಂದು ರಾಯಚೂರಿನ ಜವಳಗೇರಾ ಸಂತ ಪ್ರಾನ್ಸಿಸ್ ಚರ್ಚಿನ ಧರ್ಮಗುರು ಫಾ.ಅಲ್ಪೋನ್ಸ್ ಜಾರ್ಜ್ ಹೇಳಿದರು.

ಅವರು ಸೋಮವಾರ ಸಂಜೆ ಕೊಟ್ಟಿಗೆಹಾರದ ಸೆಕ್ರೆಡ್ ಹಾರ್ಟ್ ಚರ್ಚ್ ವಾರ್ಷಿಕೋತ್ಸವದಲ್ಲಿ ವಿಶೇಷ ಪೂಜೆ ಅರ್ಪಿಸಿ ಮಾತನಾಡಿದರು.’ಕುಟುಂಬದಲ್ಲಿ ನಿತ್ಯ ದೇವರ ಕೃಪಾವರಗಳನ್ನು ನೆನೆಸಿ ಐಕ್ಯತೆಯಿಂದ ಜೀವಿಸಬೇಕು.ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಹಿರಿಯರನ್ನು ಗೌರವಿಸುವ ಸಂಪ್ರದಾಯ ರೂಢಿಸಿಕೊಳ್ಳಬೇಕು.ಆಗ ಮಾತ್ರ ಯೇಸುವಿನ ಪವಿತ್ರ ಹೃದಯದ ಪ್ರೀತಿ ನಮಗೆ ದೊರಕಲು ಸಾಧ್ಯವಾಗುತ್ತದೆ’ ಎಂದರು.

ಕೊಟ್ಟಿಗೆಹಾರ ಚರ್ಚ್ ಧರ್ಮಗುರು ಫಾ.ವಿಲಿಯಂ ಬೆರ್ನಾಡ್ ಮಾತನಾಡಿ ಸಂದೇಶ ನೀಡಿ ಯೇಸುವಿನ ಪವಿತ್ರ ಹೃದಯದ ಹಬ್ಬವು ಏಸುವಿನ ಅಪಾರ ಪ್ರೀತಿ,ದಯೆ ಮತ್ತು ಕರುಣೆಯನ್ನು ನೆನಪಿಸುವ ದಿನವಾಗಿದೆ.ಈ ಹಬ್ಬವು ದೇವರಿಗೆ ಮನುಕುಲದ ಮೇಲಿರುವ ನಿಸ್ವಾರ್ಥ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ’ ಎಂದರು.ಬಳಿಕ ಸಂಭ್ರಮದ ಹಬ್ಬಕ್ಕೆ ನೆರವಾದ ಧಾನಿಗಳು,ಶ್ರಮಿಸಿದ ಸರ್ವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.ವಾರ್ಷಿಕ ಸಂಭ್ರಮದಲ್ಲಿ ಡೆನಿಕಾ ಏಂಜೆಲ್ ಪಿಂಟೊ ಎಂಬ ಮಗುವಿಗೆ ಪರಮ ಪ್ರಸಾದ ಸಂಸ್ಕಾರ ನೀಡಲಾಯಿತು.ಪೂಜೆಯ ಬಳಿಕ ರಾತ್ರಿ ಚಂದವಳ್ಳಿಯ ವಾದ್ಯ ಮೇಳದ ತಂಡದೊಂದಿಗೆ ಕೊಟ್ಟಿಗೆಹಾರ ಪೇಟೆಯಲ್ಲಿ ಭಕ್ತಾದಿಗಳು ಮೇಣದ ಬತ್ತಿ ಹಿಡಿದು ಸಂಭ್ರಮದ ತೇರಿನ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ವಲಯದ ಧರ್ಮಗುರು ಫಾ.ಪೌಲ್ ಡಿಸೋಜ,ವಿವಿಧ ಚರ್ಚಿನ ಧರ್ಮಗುರುಗಳಾದ ಫಾ. ಶಾಂತರಾಜ್, ಫಾ.ಲ್ಯಾನ್ಸಿ ಪಿಂಟೋ, ಫಾ.ಜಾನ್ ಪಾಲ್, ಫಾ.ಡೇವಿಡ್ ಪ್ರಕಾಶ್, ಫಾ.ರಾಜೇಂದ್ರ ಕುಮಾರ್, ಫಾ.ಫೆಲಿಕ್ಸ್ ರೊಸಾರಿಯೊ,ಫಾ.ಅಂಥೋಣಿ ರಾಜ್, ಫಾ.ಅರುಣ್ ಲೋಬೊ,ಫಾ.ಥಾಮಸ್ ಕಲಘಟಗಿ ಸೇರಿದಂತೆ 30ಕ್ಕೂ ಅಧಿಕ ಗುರುಗಳು ಹಾಗೂ ಜಾವಳಿ,ಬಾಳೂರು,ಕೊಟ್ಟಿಗೆಹಾರ ಚರ್ಚಿನ ಸುತ್ತಮುತ್ತಲ ಕ್ರೈಸ್ತ ಭಕ್ತಾಧಿಗಳು ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರು.
