ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಗಬ್ಗಲ್ ಸಮೀಪದ ಕಲ್ಮನೆ ಗ್ರಾಮದಲ್ಲಿ ಭಾರಿ ಗಾಳಿ-ಮಳೆ ಮದುವೆ ಸಂಭ್ರಮಕ್ಕೆ ಅಡ್ಡಿಯಾಯಿತು. ಊಟಕ್ಕಾಗಿ ಹಾಕಲಾಗಿದ್ದ ಶಾಮಿಯಾನದ ಟೆಂಟ್ ಭಾರಿ ಗಾಳಿಗೆ ಮುರಿದು ಬಿದ್ದಿದ್ದು, ಚೇರ್ಗಳು ಹಾರಿ ಹೋಗಿವೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಸಂಬಂಧಿಕರು, ಸ್ನೇಹಿತರು ಪರದಾಡುವಂತಾಯಿತು. ಊಟ ಮಾಡಲು ಅತಿಥಿಗಳು ಹರಸಾಹಸಪಟ್ಟರು. ಮಳೆ ನಿಂತ ಬಳಿಕ ಸಿಕ್ಕ ಜಾಗದಲ್ಲೇ ನಿಂತು ಊಟ ಮಾಡಿ ತೆರಳಿದರು.

ಕಲ್ಮನೆ ಗ್ರಾಮದ ರೋಹಿಣಿ ಅವರ ವಿವಾಹ ಸಕಲೇಶಪುರ ತಾಲೂಕಿನ ಹೆನ್ನಾಳ್ಳಿ ಗ್ರಾಮದ ಗಗನ್ ಅವರೊಂದಿಗೆ ನಡೆಯುತ್ತಿದ್ದಾಗ ಏಕಾಏಕಿ ಆರಂಭವಾದ ಗಾಳಿ-ಮಳೆಯಿಂದ ಮದುವೆ ಮನೆ ಅಸ್ತವ್ಯಸ್ತಗೊಂಡಿತು.
ಕೊಪ್ಪ ತಾಲೂಕಿನ ಸೀಗೋಡು ಬಳಿ ಸಿಡಿಲಿನ ಆರ್ಭಟಕ್ಕೆ ಕಾಫಿ ತೋಟವೊಂದರಲ್ಲಿದ್ದ ಐದಾರು ಮರಗಳು ಸೀಳಿಹೋಗಿವೆ. ಸಿಡಿಲೇಟಿಗೆ ಹತ್ತಾರು ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ.
ಕಳಸ ತಾಲೂಕಿನಲ್ಲಿ ಕಳೆದ ಒಂದು ಗಂಟೆಗಳ ಕಾಲ ಮಳೆ ಅಬ್ಬರಿಸಿ ಕಲ್ಮಕ್ಕಿ ಹಿನಾರಿ ಗ್ರಾಮದ ನಿವಾಸಿ ವನಜಾಕ್ಷಿ ಎಂಬವರ ಮನೆಯ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಮನೆ ಸಾಮಗ್ರಿಗೆ ಹಾನಿಯಾಗಿದೆ.
