ಬೆಂಗಳೂರು: ತೆರಿಗೆ ರಹಿತ ಚಿನ್ನದ ಆಮದು ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ, ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ರಾಜ್ಯದ್ಯಕ್ಷರಾದ ಟಿ.ಎ.ಶರವಣ ಸ್ವಾಗತಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಯುದ್ಧಗಳ ಪರಿಣಾಮ ದೇಶದ ಆರ್ಥಿಕತೆಯ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ತಡೆಯಲು ಕೇಂದ್ರವು ಹಲವು ನಿಯಮಗಳನ್ನು ಘೋಷಿಸಿದೆ ಇದರಿಂದ ದೇಶದ ಆರ್ಥಿಕತೆಗೆ ಅನುಕೂಲವಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಕಠಿಣ ನಿಯಮಗಳೇನು..?
ಒಂದು ಲೈಸೆನ್ಸ್ಗೆ ಗರಿಷ್ಠ 100 ಕೆ.ಜಿ ಚಿನ್ನ ಮಾತ್ರ ಆಮದು ಮಾಡಲು ಅನುಮತಿ ನೀಡಲಾಗುವುದು.
ಆಭರಣ ರಫ್ತು ಮಾಡುವ ಕಂಪನಿಗಳಿಗೆ ಹೊಸ ನಿಯಮ ಅನ್ವಯವಾಗಲಿದೆ.
ಲೈಸೆನ್ಸ್ ಪಡೆಯುವ ಕಂಪನಿಗಳ ಕಾರ್ಖಾನೆಗಳನ್ನು ಅಧಿಕಾರಿಗಳು ಭೌತಿಕವಾಗಿ ಪರಿಶೀಲಿಸಲಿಸಿ, ಉತ್ಪಾದನಾ ಸಾಮರ್ಥ್ಯ ಮತ್ತು ನಿಜವಾದ ಕಾರ್ಯಾಚರಣೆ ಖಚಿತಪಡಿಸಿಕೊಂಡ ಬಳಿಕವಷ್ಟೆ ಅನುಮತಿ ನೀಡಲಾಗುವುದು.
ಲೈಸೆನ್ಸ್ ಪಡೆದ ಕಂಪನಿಗಳು ಪ್ರತೀ 15 ದಿನಕ್ಕೊಮ್ಮೆ ಚಿನ್ನ ಆಮದು ಮತ್ತು ರಫ್ತು ವಿವರಗಳ ವರದಿ ಸಲ್ಲಿಸಲು ಸೂಚನೆ ನಿಡಲಾಗುವುದು.
ಹಿಂದಿನ ರಫ್ತು ಗುರಿಯ ಕನಿಷ್ಠ ಶೇ. 50 ಮಾರಾಟ ಪೂರ್ಣಗೊಳಿಸಿದ ಕಂಪನಿಗಳಿಗೆ ಮಾತ್ರ ಹೊಸ ಖರೀದಿಗೆ ಅನುಮತಿ ನೀಡಲಾಗುವುದು ಎಂದು ಕೇಂದ್ರ ಹೇಳಿದೆ.
ಹೊಸ ನಿಯಮದ ಲಾಭಗಳೇನು.?
ದೇಶಕ್ಕೆ ಅನಗತ್ಯವಾಗಿ ಬರುತ್ತಿದ್ದ ಹೆಚ್ಚಿನ ಚಿನ್ನದ ಆಮದು ಕಡಿಮೆಯಾಗಬಹುದು.
ಡ್ಯೂಟಿ-ಫ್ರೀ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡು ಚಿನ್ನ ಆಮದು ಮಾಡುತ್ತಿದ್ದ ನಕಲಿ ಅಥವಾ ಕಾಗದದ ಕಂಪನಿಗಳನ್ನು ನಿರ್ಬಂಧಿಸಬಹುದು.
ಇದರಿಂದ ನಿಜವಾದ ಆಭರಣ ರಫ್ತುಗಾರರಿಗೆ ಮಾತ್ರ ಲಾಭ ಸಿಗುವಂತಾಗಬಹುದು.
ಸರ್ಕಾರಕ್ಕೆ ಆಮದು ಮತ್ತು ರಫ್ತು ಚಟುವಟಿಕೆಗಳ ಮೇಲಿನ ಮೇಲ್ವಿಚಾರಣೆ ಸುಲಭವಾಗುತ್ತದೆ.
ಚಿನ್ನದ ಕಳ್ಳಸಾಗಣೆ ಮತ್ತು ಅಕ್ರಮ ವಹಿವಾಟುಗಳನ್ನು ತಡೆಯಲು ಸಹಾಯಕವಾಗಬಹುದು.
ಚಿನ್ನ ಖರೀದಿಗೆ ಹೊರ ದೇಶಗಳಿಗೆ ಹೋಗುವ ಡಾಲರ್ ವೆಚ್ಚ ಕಡಿಮೆಯಾಗುತ್ತದೆ, ಭಾರತದ ವಿದೇಶಿ ವಿನಿಮಯ ಸಂಗ್ರಹ ಉಳಿಸಲು ಸಹಾಯವಾಗಬಹುದು
ರೂಪಾಯಿ ಮೌಲ್ಯದ ಮೇಲೆ ಇರುವ ಒತ್ತಡ ಸ್ವಲ್ಪ ಕಡಿಮೆಯಾಗಬಹುದು
ದೇಶೀಯ ಹೂಡಿಕೆ ಚಿನ್ನದ ಕಡೆಗೆ ಹೋಗುವುದನ್ನು ಕಡಿಮೆ ಮಾಡಿ ಉತ್ಪಾದನಾ ಕ್ಷೇತ್ರ, ಉದ್ಯಮ, ಷೇರು ಮಾರುಕಟ್ಟೆ ಮೂಲಸೌಕರ್ಯ ಹೂಡಿಕೆ ಇತ್ಯಾದಿ ಉತ್ಪಾದಕ ಕ್ಷೇತ್ರಗಳ ಕಡೆ ಹಣ ಹರಿಯುವಂತೆ ಮಾಡಲು ಸರ್ಕಾರ ಈಕ್ರಮಗಳನ್ನು ಕೈಗೊಂಡಿದೆ ಎಂದು ಶರವಣ ಅವರು ಹೇಳಿದ್ದಾರೆ.
